ಉಡುಪಿ, ಕಾಪು, ಕಾರ್ಕಳ ಜನಕ್ಕೆ ತಿಳುವಳಿಕೆ ಇಲ್ಲ- ಸಿಎಂ ಹೇಳಿಕೆ ವಿರುದ್ಧ ಕರಾವಳಿ ಗರಂ

ಉಡುಪಿ: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕರಾವಳಿಯ ಜನ ಗರಂ ಆಗಿದ್ದಾರೆ. ತಿಳುವಳಿಕೆ ಇರೋದಕ್ಕೆ ನಾವು ಕುಟುಂಬ ರಾಜಕಾರದ ಹಿಂದೆ ಬಿದ್ದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಹಿಂದೆ ಸಿಎಂ ಆಗಿದ್ದಾಗ ಎಷ್ಟು ಕೊಟ್ಟಿದ್ದೀರಿ, ಈ ಬಜೆಟ್ ಮಂಡನೆ ಸಂದರ್ಭ ಕೊಟ್ಟದ್ದೆಷ್ಟು ಗೊತ್ತಿದೆ. ತಿಳುವಳಿಕೆ ಇದ್ದದ್ದಕ್ಕೆ ಬಿಜೆಪಿಗೆ ವೋಟ್ ಹಾಕ್ತೇವೆ. ನಮಗೆ ತಿಳುವಳಿಕೆ ಇದೆ. ಕುಟುಂಬ ರಾಜಕಾರಣಕ್ಕೆ ನಾವು ವೋಟ್ ಹಾಕಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲಾಗುತ್ತಿದೆ. ಜೆಡಿಎಸ್ ಗೆ ಅಸ್ತಿತ್ವವೇ ಇಲ್ಲದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಮಧ್ವರಾಜ್ ಜೆಡಿಎಸ್ ಸೇರಿ ಬುದ್ದಿಯಿಲ್ಲ ಎನ್ನುವುದನ್ನು ಪ್ರೂವ್ ಮಾಡುತ್ತಿದ್ದಾರೆ ಎಂದು ಇದೇ ವೇಳೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಿಎಂ ನೀಡಿರುವ ಹೇಳಿಕೆ ಕರಾವಳಿ ಮತದಾರರ ಕೋಪಕ್ಕೆ ಕಾರಣವಾಗಿದೆ.

ಸಿಎಂ ಹೇಳಿದ್ದೇನು..?
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಸಿಎಂ, ಉಡುಪಿ, ಕಾರ್ಕಳ ಕಾಪು ಸೇರಿದಂತೆ ಕರಾವಳಿ ಭಾಗದ ಜನರಿಗೆ ತಿಳುವಳಿಕೆ ಇಲ್ಲ. ಅಲ್ಲಿಯ ಜನ ಬಿಜೆಪಿಗೆ ಮಾತ್ರ ವೋಟ್ ಹಾಕ್ತಾರೆ. ಬಿಜೆಪಿಯನ್ನು ಗೆಲ್ಲಿಸುವ ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಜನರಿಗೆ ಶಾಲೆ ಕಾಲೇಜು ಕಟ್ಟಿಸಿಕೊಡಲು ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಕಿಚಾಯಿಸಿದ್ದರು.

ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಅಲ್ಲದೆ ದೇಶ-ವಿದೇಶಗಳಿಂದ ಈ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಸಿಎಂ ಕುರಿತಾದ ವೈಯಕ್ತಿಕ ನಿಂದನೆಗಳಿಗೂ ಈ ಹೇಳಿಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *