ಶಾಸಕರನ್ನು ಬಿಸಿಲಿನಲ್ಲಿ ನಡೆಸಿ ಬೆವರಿಳಿಸಿದ ಜನ!

ಹಾಸನ: ಚನ್ನರಾಯಪಟ್ಟಣ ದಿಡಗಾ ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕರಿಗೆ ಜನರು ಬೆವರಿಳಿಸಿದ್ದಾರೆ. ಸ್ಥಳಕ್ಕೆ ಬಂದ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಬಾಲಕೃಷ್ಣರನ್ನ ಒಂದು ಕಿಲೊಮೀಟರ್ ನಡೆಸಿ ಗ್ರಾಮದಲ್ಲಿ ಯಾವ ಪರಿಸ್ಥಿತಿ ಇದೆ ಅನ್ನೋದನ್ನ ಅರ್ಥ ಮಾಡಿಸಿದ್ದಾರೆ.

ಬರಗಾಲಪೀಡಿತ ಗ್ರಾಮಗಳಿಗೆ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಇಂದು ಚನ್ನರಾಯಪಟ್ಟಣ ದಿಡಗಾ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಶಾಸಕ ಬಾಲಕೃಷ್ಣ ಜನರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಗ ಬಿರು ಬಿಸಿಲಿನಲ್ಲಿ ಬರಡಾದ ಕೆರೆ ತೋರಿಸಲು ಅವರನ್ನು ಜನರು ಸುಮಾರು 1 ಕಿ.ಮೀ ವರೆಗೆ ನಡೆಸಿಕೊಂಡೇ ಕರೆದೊಯ್ದು, ಕೆರೆಯಲ್ಲೇ ಕೂರಿಸಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ನಿಮ್ಮ ಕಾಂಕ್ರಿಟ್ ರಸ್ತೆ ನಮಗೆ ಬೇಡ, ಕೆರೆ ತುಂಬಿಸಿ ಸಾಕು. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವು ಚಂದಾ ಎತ್ತಿ ಕೊಡ್ತೀವಿ ಯೋಜನೆ ಜಾರಿಮಾಡಿ ಎಂದು ಬಿಸಿಲಿನಲ್ಲಿ ಶಾಸಕರ ಬೆವರಿಳಿಸಿದ್ದಾರೆ. ಅಲ್ಲದೆ ರೊಚ್ಚಿಗೆದ್ದಿದ್ದ ರೈತರನ್ನು ಸಮಾಧಾನಪಡಿಸಲು ಶಾಸಕರು ಹೈರಾಣಾಗಿ ಹೋದರು. ಕೆರೆ ತುಂಬಿಸದಿದ್ದರೆ ಇನ್ಮುಂದೆ ಯಾವುದೇ ಚುನಾವಣೆಗೂ ಮತ ಚಲಾಯಿಸಲ್ಲ ಎಂದು ಎಚ್ಚರಿಕೆಯನ್ನು ಕೂಡ ನೀಡಿ ಕಳುಹಿಸಿದ್ದಾರೆ. ಆದರಿಂದ ಲೋಕಸಭೆ ಚುನಾವಣೆ ಬಳಿಕ ಕೆರೆಗೆ ನೀರು ತುಂಬಿಸೋದಾಗಿ ಶಾಸಕರು ಜನರಿಗೆ ಭರವಸೆ ನೀಡಿ ತೆರಳಿದರು.

Comments

Leave a Reply

Your email address will not be published. Required fields are marked *