ಅಕ್ರಮ ತಡೆಯಲು ಹೋದ ಪಿಡಿಓ ಮೇಲೆ ಜಾಲಿ ಮುಳ್ಳುಗಳಿಂದ ಹಲ್ಲೆ!

ಚಿಕ್ಕಬಳ್ಳಾಪುರ: ಸರ್ಕಾರಿ ಜಾಗದಲ್ಲಿ ಮನೆಗೆ ಪಾಯ ಹಾಕುತ್ತಿದ್ದುದನ್ನ ಪ್ರಶ್ನೆ ಮಾಡಿದ ಪಿಡಿಓ ಅಧಿಕಾರಿಗೆ ಜಾಲಿ ಮರದ ಕೊಂಬೆಯಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ನ ಜೆಪಿ ನಗರದಲ್ಲಿ ನಡೆದಿದೆ.

ತಿರುಮಣಿ ಗ್ರಾಮ ಪಂಚಾಯ್ತಿಯ ಪಿಡಿಓ ಸುಭಾನ್ ಹಲ್ಲೆಗೊಳಗಾದ ಅಧಿಕಾರಿ. ಗ್ರಾಮದ ಗೋಪಾಲಪ್ಪ ಹಲ್ಲೆ ಮಾಡಿದ ವ್ಯಕ್ತಿ. ಬೀಚಗಾನಗಳ್ಳಿ ಕ್ರಾಸ್ ಜೆಪಿ ನಗರಕ್ಕೆ ಹೊಂದಿಕೊಂಡಿರುವ ತಿರುಮಣಿ ಗ್ರಾಮ ಪಂಚಾಯ್ತಿಗೆ ಸೇರಿದ ಸರ್ಕಾರಿ ಭೂಮಿಯಲ್ಲಿ ಗೋಪಾಲಪ್ಪ ಮನೆ ಕಟ್ಟಲು ಮುಂದಾಗಿದ್ದ. ಹೀಗಾಗಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಬೇಡ ಅಂತ ಪಿಡಿಓ ಸುಭಾನ್ ಗೋಪಾಲಪ್ಪಗೆ ತಾಕೀತು ಮಾಡಿದ್ದಾರೆ.

ಪಿಡಿಓ ಮಾತಿನಿಂದ ಕೆರಳಿದ ಗೋಪಾಲಪ್ಪ ಅಲ್ಲೇ ಇದ್ದ ಓಣಗಿದ ಜಾಲಿ ಮುಳ್ಳುಗಳಿಂದ ತುಂಬಿದ ಕೊಂಬೆ ತೆಗೆದುಕೊಂಡು ಸುಭಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಇದ್ರಿಂದ ಪಿಡಿಓ ಸುಭಾನ್ ತಲೆ, ಕುತ್ತಿಗೆ ಹಾಗೂ ಕೈಗೆ ಜಾಲಿ ಮುಳ್ಳುಗಳು ಚುಚ್ಚಿ ಗಾಯಗಳಾಗಿವೆ. ಘಟನೆ ವೇಳೆ ಪಿಡಿಓ ಸುಭಾನ್ ಸಹಾಯಕ್ಕೆ ಬಂದ ತಿರುಮಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಮಾಂಜಿನಪ್ಪ ಅವರ ಮೇಲೆ ಕೂಡ ಹಲ್ಲೆ ಮಾಡಲಾಗಿದೆ.

ಗಾಯಾಳು ಸುಭಾನ್ ಗುಡಿಬಂಡೆ ಅವರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಗೋಪಾಲಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ನಂತರ ಊರು ಬಿಟ್ಟು ಗೋಪಾಲಪ್ಪ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

 

Comments

Leave a Reply

Your email address will not be published. Required fields are marked *