ಬದುಕಿದ್ದ ಯುವಕನನ್ನು ಮೃತಪಟ್ಟಿದ್ದಾನೆಂದು ಶವಾಗಾರದಲ್ಲಿಟ್ರು- ಹುಬ್ಬಳ್ಳಿ ಕಿಮ್ಸ್ ವೈದ್ಯರ ಎಡವಟ್ಟಿಗೆ ತೀವ್ರ ಆಕ್ರೋಶ

ಹುಬ್ಬಳ್ಳಿ: ಬದುಕಿದ್ದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಕಿಮ್ಸ್ ವೈದ್ಯರು ಶವಾಗಾರದಲ್ಲಿಡುವ ಮೂಲಕ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

ಭಾನುವಾರ ಸಂಜೆ 7 ಗಂಟೆಗೆ ಕಾರ್ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಅನಿಲ್ ಎಂಬಾತ ಮೃತಪಟ್ಟರೆ, ಹುಬ್ಬಳ್ಳಿ ಆನಂದ ನಗರದ ಪ್ರವೀಣ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸಂಬಂಧಿಗಳು ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

ಅಂತೆಯೇ ಗಂಭೀರ ಸ್ಥಿತಿಯಲ್ಲಿದ್ದ ಪ್ರವೀಣ್ ಅವರನ್ನು ವೈದ್ಯರು ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿಕೊಂಡಿದ್ದಾರೆ. ಆದ್ರೆ ಇಂದು ನಸುಕಿನ ಜಾವ 3 ಘಂಟೆ ಸುಮಾರಿಗೆ 20 ನಿಮಿಷದ ಹಿಂದೆ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿ ಶವಾಗಾರಕ್ಕೆ ಸಾಗಿಸಿದ್ದಾರೆ.

ಬಳಿಕ ಬೆಳಗ್ಗೆ 10 ಘಂಟೆಯ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಸಲೆಂದು ಪ್ರವೀಣ್ ದೇಹ ಶವಾಗಾರದಿಂದ ಹೊರತೆಗೆಯುವಾಗ ಅಲ್ಲೇ ಇದ್ದ ಗೆಳೆಯರು ಮತ್ತು ಸಂಬಂಧಿಕರಿಗೆ ಪ್ರವೀಣ್ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ವೈದ್ಯರಿಗೆ ತಿಳಿಸುತ್ತಾರೆ. ಈ ವೇಳೆ ವೈದ್ಯರು ಮತ್ತು ಕುಟುಂಬಸ್ಥರಿಗೆ ಮಾತುಕತೆ ನಡೆಯುತ್ತದೆ. ಬಳಿಕ ಪ್ರವೀಣ್ ಅವರನ್ನು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಆದ್ರೆ ಖಾಸಗಿ ಆಸ್ಪತ್ರೆ ವೈದ್ಯರು 10 ನಿಮಿಷದ ಹಿಂದೆಯಷ್ಟೇ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಪ್ರವೀಣ್ ಕುಟುಂಬಸ್ಥರು, ಸಂಬಂಧಿಕರು ಕಿಮ್ಸ್ ಆಸ್ಪತ್ರೆಯ ವೈದ್ಯರು ಮಹಾ ಎಡವಟ್ಟಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *