ಮೈತ್ರಿ ಉಳುವಿಗಾಗಿ ಡಿಸಿಎಂ ಪರಮೇಶ್ವರ್ ತಲೆದಂಡ!

ಬೆಂಗಳೂರು: ಅತೃಪ್ತ ಶಾಸಕರ ಓಲೈಕೆಗೆ ಮೈತ್ರಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಬೆಂಗಳೂರು ಉಸ್ತುವಾರಿಯನ್ನು ಬಿಟ್ಟುಕೊಡುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ವೇಣುಗೋಪಾಲ್ ಡಿಸಿಎಂ ಪರಮೇಶ್ವರ್ ಜೊತೆ ಚರ್ಚಿಸಿದ್ದು, ರಾಮಲಿಂಗಾರೆಡ್ಡಿ ಅವರನ್ನು ವಾಪಾಸ್ ಕರೆತರಲು ಬೆಂಗಳೂರು ಉಸ್ತುವಾರಿಯ ಆಫರ್ ನೀಡಿದ್ದು, ಹೀಗಾಗಿ ಬಿಟ್ಟುಕೊಡುವಂತೆ ಸೂಚಿಸಿದ್ದಾರೆ. ವೇಣುಗೋಪಾಲ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಬೆಂಗಳೂರು ಉಸ್ತುವಾರಿಯನ್ನು ರಾಮಲಿಂಗರೆಡ್ಡಿ ಹೆಗಲಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಡಿಸಿಎಂ ಪರಮೇಶ್ವರ್ ತಲೆದಂಡವಾದರೆ ರಾಮಲಿಂಗಾರೆಡ್ಡಿ ಸೇರಿದಂತೆ ಗೋಪಾಲಯ್ಯ, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಹಾಗೂ ಮುನಿರತ್ನ ವಾಪಾಸ್ ಬರಬಹುದು ಎಂಬುದು ಕೈ ನಾಯಕರ ಲೆಕ್ಕಾಚಾರ. ಅಲ್ಲದೆ, ಉಸ್ತುವಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ ವಹಿಸಿದರೆ, ಬೆಂಗಳೂರಿನ ಎಲ್ಲ ಶಾಸಕರು ರಾಜೀನಾಮೆಯನ್ನು ಹಿಂಪಡೆಯಲಿದ್ದಾರೆ ಎಂದು ಕೈ ನಾಯಕರು ಅಂದಾಜಿಸಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಕಾಂಗ್ರೆಸ್‍ನ 10 ಸಚಿವರಿಂದ ರಾಜೀನಾಮೆ ಕೊಡಿಸಲು ಕೈ ನಾಯಕರು ಮುಂದಾಗುವ ಮೂಲಕ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ಸಾ.ರಾ.ಮಹೇಶ್, ಜಯಮಾಲಾ ಸೇರಿದಂತೆ ಒಟ್ಟು 10 ಸಚಿವರ ರಾಜೀನಾಮೆ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂಬ ಚರ್ಚೆಗಳು ಕೈ ಅಂಗಳದಲ್ಲಿ ಆರಂಭಗೊಂಡಿವೆ.

Comments

Leave a Reply

Your email address will not be published. Required fields are marked *