`ಅಪ್ಪ ನೀವು ಮುಂದೆ ಹೋಗಿ ನಾನು ಹಿಂದೆ ಬರುವೆ’ ಎಂದ ಮಗಳು ಶವವಾಗಿ ಬಂದಳು!

ಮುಂಬೈ: `ಅಪ್ಪ ನೀವು ಮುಂದೆ ಹೋಗಿ ನಾನು ಹಿಂದೆ ಬರುವೆ’ ಎಂದು ತಂದೆಗೆ ಹೇಳಿದ್ದ ಮಗಳು ಮನೆಗೆ ಶವವಾಗಿ ಬಂದಿದ್ದಾಳೆ.

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ದುರಂತ ಸಂಭವಿಸುವ ಮೊದಲು ಮಗಳು ಶ್ರದ್ಧಾ ವರ್ಪೆ(25) ತಂದೆ ಕಿಶೋರ್ ವರ್ಪೆ ಅವರಲ್ಲಿ ನಾನು ಹಿಂದೆ ಬರುತ್ತೇನೆ ಎಂದು ಹೇಳಿ ತಂದೆಯನ್ನು ಮುಂದಕ್ಕೆ ಕಳುಹಿಸಿದ್ದಳು. ಆದರೆ ಶುಕ್ರವಾರ ಎಲ್ಫಿನ್‍ಸ್ಟೋನ್ ರೈಲ್ವೇ ನಿಲ್ದಾಣದಲ್ಲಿ ಪಾದಚಾರಿಗಳು ಸೇತುವೆ ದಾಟತ್ತಿದ್ದಾಗ ನಡೆದ ದುರಂತದಲ್ಲಿ ಶ್ರದ್ಧಾ ಸಾವನ್ನಪ್ಪಿದ್ದಾಳೆ.

ನಡೆದಿದ್ದೇನು?: ಶ್ರದ್ಧಾ ಮತ್ತು ತಂದೆ ಕಿಶೋರ್ ವರ್ಪೆ ಇವರಿಬ್ಬರು ಎಲ್ಫಿನ್‍ಸ್ಟೋನ್ ರಸ್ತೆಯಲ್ಲಿರುವ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಥಾಣೆ ಜಿಲ್ಲೆಯ ಸಮೀಪದ ವಿಠ್ಠಲ್ವಾಡಿಯಲ್ಲಿರುವ ತಮ್ಮ ಮನೆಯಿಂದ ಪ್ರತಿದಿನ ಒಟ್ಟಿಗೆ ಆಫಿಸ್‍ಗೆ ಹೋಗುತ್ತಿದ್ದರು.

ಶುಕ್ರವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಸುಮಾರು 10.15 ಕ್ಕೆ ಪಾರೇಲ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಯಾವಾಗಲೂ ಇರೋ ರೀತಿ ಹೆಚ್ಚಿನ ಜನಸಂದಣಿ ಇತ್ತು. ಇದನ್ನು ಗಮನಿಸಿದ ಶ್ರದ್ಧಾ ತಂದೆಯನ್ನು ನೀವು ಮುಂದೆ ಹೋಗಿ ನಾನು ಹಿಂದೆ ಬರುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ.

ಕಿಶೋರ್ ಮುಂದೆ ಹೋಗುತ್ತಿದ್ದಂತೆ, ಶ್ರದ್ಧಾ ಹಿಂದೆ ಬರುತ್ತಿದ್ದರು. ಆದರೆ ತಕ್ಷಣ ಮಳೆ ಜೋರಾಗಿದ್ದರಿಂದ ರೈಲ್ವೇ ನಿಲ್ದಾಣದ ಸೇತುವೆ ಮೇಲೆ ಅತಿ ಹೆಚ್ಚು ಜನಸಂದಣಿ ತುಂಬಿ ಹೋಗಿತ್ತು. ಇದರಿಂದ ಜನರ ಕಾಲ್ತುಳಿತಕ್ಕೆ ಸಿಕ್ಕಿ ಶ್ರದ್ಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಕಿಶೋರ್ ಸಂಬಂಧಿಕರಾದ ಭೀಮ್ರಾವ್ ಧುಲಾಪ್ ಹೇಳಿದ್ದಾರೆ.

ಕಿಶೋರ್ ಅವರು ಮಗಳು ಕಾಣದಿದ್ದಕ್ಕೆ ಅವಳ ಫೋನ್‍ಗೆ ಕರೆ ಮಾಡಿದ್ದಾರೆ. ಆದರೆ ಶ್ರದ್ಧಾ ಯಾವುದೇ ಪ್ರತಿಕ್ರಿಯೇ ನೀಡಲಿಲ್ಲ. ಅಷ್ಟರಲ್ಲಿ ಶ್ರದ್ಧಾ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ ಶವವಾಗಿದ್ದರು. ಇದೆಲ್ಲಾ ಕೇವಲ ಹತ್ತು ನಿಮಿಷಗಳಲ್ಲಿ ನಡೆದ ದುರಂತವಾಗಿದೆ.

ಈ ಮುಂಬೈ ರೈಲ್ವೇ ನಿಲ್ದಾಣದ ದುರಂತದಲ್ಲಿ ಸುಮಾರು 22 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

https://twitter.com/ARanganathan72/status/913769586482339841

Comments

Leave a Reply

Your email address will not be published. Required fields are marked *