ಹೆಂಡ ಕುಡಿದ ಕೋತಿ ರೀತಿ ಪಾಕ್ ಆಡ್ತಿದೆ: ಶಿವಸೇನೆ

ಮುಂಬೈ: ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟಕ್ಕೆ ಅಡ್ಡಿಪಡಿಸಿ, ಪಾಕ್ ಹೆಂಡ ಕುಡಿದ ಕೋತಿಯಂತೆ ಆಡುತ್ತಿದೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.

ರಂಜಾನ್ ಹಬ್ಬದ ಪ್ರಯುಕ್ತ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಪಾಕ್ ಸೇನಾ ಸಿಬ್ಬಂದಿ ತಡೆಯುಂಟು ಮಾಡಿದ್ದು, ಪಾಕ್ ಹೆಂಡ ಕುಡಿದ ಕೋತಿಯಂತೆ ಆಡುತ್ತಿದೆ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಾಕಿಸ್ತಾನದ ಸೇನಾ ಸಿಬ್ಬಂದಿ ಇಫ್ತಾರ್ ಕೂಟಕ್ಕೆ ಅಡ್ಡಿ ಪಡಿಸಿದ್ದಕ್ಕೆ ತೀವ್ರವಾಗಿ ಖಂಡಿಸಿ, ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪಾಕ್ ಸೇನೆಯನ್ನು ಮದ್ಯಪಾನ ಮಾಡಿದ ಕೋತಿಗಳಿಗೆ ಹೋಲಿಸಿದ್ದಾರೆ. ಹಾಗೆಯೇ ಪಾಕ್ ಕೋತಿಗಳು ಮಾಡಿದ ಈ ಅವಮಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲದೆ, ಉಗ್ರ ಮಸೂದ್ ವಿಚಾರದಲ್ಲಿ ಪಾಕಿಸ್ತಾನ ದ್ವಂದ್ವ ನೀತಿ ಪಾಲಿಸುತ್ತಿದೆ. ನಮ್ಮ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಭಿನಂದನೆ ತಿಳಿಸಿ, ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡೋಣ ಎಂದಿದ್ದಾರೆ. ಆದರೆ, ಪಾಕ್ ಸೇನಾ ಸಿಬ್ಬಂದಿ ಮಾತ್ರ ಇಂತಹ ಹೀನ ವರ್ತನೆ ತೋರಿಸಿದ್ದಾರೆ. ಇಫ್ತಾರ್ ಊಟಕ್ಕೆ ಬಂದ ಗಣ್ಯರಿಗೆ ಅಗೌರವ ತೋರಿದ್ದಾರೆ. ಇದು ಯಾವ ರೀತಿಯ ಶಾಂತಿ ಪಾಲನೆ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಭಾರತದ ರಾಯಭಾರಿ ಕಚೇರಿ ವತಿಯಿಂದ ಇಫ್ತಾರ್ ಊಟಕ್ಕೆ ಪಾಕಿಸ್ತಾನದ ಗೌರವಾನ್ವಿತ ಪ್ರಜೆಗಳಿಗೆ ಆಹ್ವಾನ ನೀಡಲಾಗಿತ್ತೆ ಹೊರತು ಜೈಷ್-ಇ-ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಆಜಾದ್‍ಗೆ ಆಹ್ವಾನಿಸಿರಲಿಲ್ಲ ಎಂದು ಟಾಂಗ್ ಕೊಟ್ಟರು.

ಭಾರತ ಪಠಾಣ್‍ಕೋಟ್, ಉರಿ, ಪುಲ್ವಾಮಾ ದಾಳಿಗಳ ಬಗ್ಗೆ ಪಾಕಿಸ್ತಾನಕ್ಕೆ ಸಾಕ್ಷ್ಯಗಳನ್ನು ನೀಡಿದ್ದರೂ ಪಾಕ್ ಮಾತ್ರ ಉಗ್ರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾಕ್ ಉಗ್ರರನ್ನು ಉತ್ಪಾದಿಸುವ ಕಾರ್ಖನೆಯಾಗಿ ಮಾರ್ಪಟ್ಟಿದೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದರು.

Comments

Leave a Reply

Your email address will not be published. Required fields are marked *