ಧರ್ಮಸ್ಥಳದ ಭಗವಾನ್ ಬಾಹುಬಲಿಗೆ 216 ಕಲಶಗಳಿಂದ ಪಾದಾಭಿಷೇಕ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿನ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಸ್ವಾಮಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.

ಮಂಗಲ ಪ್ರವಚನ ನೀಡಿದ ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸಾಮೀಜಿ ಮಾತನಾಡಿ, “ಎಲ್ಲೆಲ್ಲೂ ಅನ್ಯಾಯ, ಕ್ರೋಧ, ದ್ವೇಷ, ವಂಚನೆ ತಾಂಡವವಾಡುತ್ತಿರುವ ಇಂದು ಬಾಹುಬಲಿಯ ತ್ಯಾಗ ಸಂದೇಶ ವಿಶ್ವಮಾನ್ಯವಾಗಿದೆ” ಎಂದು ಹೇಳಿದರು.

ಭಾರತ ದೇಶವು ಧರ್ಮ, ಸಂಸ್ಕೃತಿಯ ನೆಲೆವೀಡಾಗಿದ್ದು, ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನೆಗೊಂಡ ಭಗವಾನ್ ಬಾಹುಬಲಿ ಮೂರ್ತಿಯ ಆರಾಧನೆಯಿಂದ ತ್ಯಾಗ, ಅಹಿಂಸೆ, ಸಂಯಮ, ಇಂದ್ರಿಯ ನಿಗ್ರಹ ಮೊದಲಾದ ಮಾನವೀಯ ಗುಣಗಳು ಉದ್ದೀಪನಗೊಂಡು, ಪರಸ್ಪರ ಪ್ರೀತಿ-ವಿಶ್ವಾಸದಿಂದ ಶಾಂತಿ, ಸಾಮರಸ್ಯ ಮೂಡಿ ಬರುತ್ತದೆ. ಆರಾಧನೆ ಮೂಲಕ ನಾವು ಭಗವಂತನಲ್ಲಿರುವ ಅಮೂಲ್ಯ ಹಾಗೂ ಅನಂತ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದುದರಿಂದಲೇ ನಾವು ವಂದೇ ತದ್ಗುಣ ಲಬ್ದಯೇ ಅಂದರೆ ದೇವರಲ್ಲಿರುವ ಅನಂತ ಗುಣಗಳು ನಮ್ಮಲ್ಲಿಯೂ ಮೂಡಿ ಬರಲಿ ಎಂದು ಪ್ರಾರ್ಥಿಸುತ್ತೇವೆ. ಬಾಹುಬಲಿ ತನ್ನ ಜೀವನದಲ್ಲಿ ಸಾಧಿಸಿ ತೋರಿಸಿದ ಅಹಿಂಸೆ, ತ್ಯಾಗ, ವೈರಾಗ್ಯದ ಮೂಲಕ ವಿಶ್ವಶಾಂತಿ ಉಂಟಾಗಲಿ ಎಂದು ಸ್ವಾಮೀಜಿ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ಬಿ. ಯಶೋವರ್ಮ, ಸೋನಿಯಾವರ್ಮ ಹಾಗೂ ಕುಟುಂಬಸ್ಥರು ಪಾದಾಭಿಷೇಕ ಮಾಡಿದರು. ಪಂಚ ನಮಸ್ಕಾರ ಮಂತ್ರ ಪಠಣ, ಜಿನ ಭಜನೆ ಹಾಗೂ ಭಕ್ತಿಗೀತೆಗಳ ಗಾಯನ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *