ಬೀದರಲ್ಲಿ 200 ಕೋಟಿ ರೂ. ವಂಚನೆ- 4 ಏಜೆಂಟ್‍ಗಳೇ ಆತ್ಮಹತ್ಯೆ

– ಹಣಕ್ಕಾಗಿ ಪರದಾಡ್ತಿದ್ದಾರೆ ಗ್ರಾಹಕರು

ಬೀದರ್: ಆಂಬಿಡೆಂಟ್ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಬೀದರ್‍ನಲ್ಲಿ ಕಮಿಷನ್ ಆಸೆಗೆ 200 ಕೋಟಿ ಜಮೆ ಮಾಡಿಸಿ ಏಜೆಂಟರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರು ಯಾವಾಗ ಬಂದು ಹಲ್ಲೆ ಮಾಡ್ತಾರೆ ಎಂಬ ಭಯಕ್ಕೆ ಈಗಾಗಲೇ 4 ಜನ ಎಜೆಂಟರ್‍ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೌದು. ಪಿಎಸಿಎಲ್ ಇಂಡಿಯನ್ ಲಿಮಿಟೆಡ್ ಅನ್ನೋ ಕಂಪನಿ ಕೋಟ್ಯಂತರ ಜನಕ್ಕೆ ಮೋಸ ಮಾಡಿದೆ. ರಿಯಲ್ ಎಸ್ಟೇಟ್ ಇನ್ಸುರೆನ್ಸ್ ಪಾಲಿಸಿ ಮಾಡಿಸಿದ್ರೆ ನಿಮ್ಮ ಹಣ ಡಬಲ್ ಮಾಡಿಕೊಡ್ತೀವಿ. ಕಡಿಮೆ ರೇಟ್‍ಗೆ ಸೈಟ್ ಪಡೆಯಬಹುದು ಹಂಗೆ ಹಿಂಗೆ ಅಂತ ರೀಲ್ ಬಿಟ್ಟು ಜನರಿಗೆ ವಂಚಿಸಿದೆ.

ಬೀದರ್‍ನಲ್ಲಿ ಕೂಡ 10 ಸಾವಿರ ಏಜೆಂಟರುಗಳು ಜನರಿಂದ ಕೋಟ್ಯಂತರ ರೂ. ಹಣ ಜಮೆ ಮಾಡಿಸಿದ್ದಾರೆ. ಆದ್ರೆ ಕಂಪನಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿಕೊಂಡು ಹೋಗಿದ್ರಿಂದ ಈಗ ಜನ ನಮ್ ಕಾಸು ವಾಪಸ್ ಕೊಡಿ ಅಂತ ಏಜೆಂಟರುಗಳ ಬೆನ್ನು ಬಿದ್ದಿದ್ದಾರೆ. ಇದ್ರಿಂದ ಭಯಗೊಂಡಿರೋ 4 ಮಂದಿ ಏಜೆಂಟರುಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದ ಏಜೆಂಟರುಗಳಿಗೂ ಜೀವಭಯ ಶುರುವಾಗಿದೆ ಅಂತ ಏಜೆಂಟ್ ರಮೇಶ್ ಬಚಾರೆ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಸರ್ಕಾರದಿಂದ ಪರವಾನಗಿ ಪಡೆದು ಕಮಿಷನ್ ಆಸೆಗೆ ಕಂಪನಿಗೆ ಸೇರಿಕೊಂಡು ಸರಿಯಾಗಿ ಕೆಲಸ ಮಾಡಿದ್ರೂ ಏಜೆಂಟರುಗಳಿಗೆ ಇದೀಗ ಈ ಗತಿ ಬಂದಿದೆ. ಈಗಾಗಲೇ ಸುಪ್ರೀಂಕೋರ್ಟ್ ಲೋಧಾ ಕಮಿಟಿ ಪಿಎಸಿಎಲ್ ಕಂಪನಿ ಮಾಲೀಕ ನಿರ್ಮಲ್ ಸಿಂಗ್ ಭಂಗು ಆಸ್ತಿಯನ್ನು ಮಾರಾಟ ಮಾಡಿ ಫಲಾನುಭವಿಗಳಿಗೆ ಹಣ ಹಂಚಿಕೆಯಾಗ್ಬೇಕು ಅಂತ ಆದೇಶಿಸಿದೆ. ಆದ್ರೂ ಫಲಾನುಭವಿಗಳಿಗೆ ಹಣ ಕೊಟ್ಟಿಲ್ಲ. ಹಾಗಾಗಿ ಜನರು ಏಜೆಂಟರ ಮನೆ ಬಾಗಿಲಿಗೆ ಬಂದಿದ್ದಾರೆ ಅಂತ ಮತ್ತೊಬ್ಬ ಏಜೆಂಟ್ ಸುನೀಲ್ ಪೂಜಾರಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿ ಏಜೆಂಟರ್‍ಗಳ ಸಂಕಷ್ಟಕ್ಕೆ ಕಾರಣವಾದ ಕಂಪನಿಯಿಂದ ಆದಷ್ಟು ಬೇಗ ಪರಿಹಾರ ಕೊಡಿಸಿ ಏಜೆಂಟರ್‍ಗಳಿಗೆ ಮುಕ್ತಿ ನೀಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *