ವಿದ್ಯುತ್ ಸಮಸ್ಯೆಗೆ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ: ಚಿದಂಬರಂ ವ್ಯಂಗ್ಯ

ನವದೆಹಲಿ: ವಿದ್ಯುತ್ ಕೊರತೆಗೆ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ, ಇದಕ್ಕೆಲ್ಲಾ 60 ವರ್ಷಗಳ ಕಾಂಗ್ರೆಸ್ ಆಡಳಿತವೇ ಕಾರಣ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವ್ಯಂಗ್ಯವಾಡಿದರು.

ಹಲವಾರು ರಾಜ್ಯಗಳು ಕಲ್ಲಿದ್ದಲು ಕೊರತೆ ಸಮಸ್ಯೆಯನ್ನು ಅನುಭವಿಸುತ್ತಿವೆ. ಈ ಸಂದರ್ಭದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಪರಿಹರಿಸಲು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿರುವ ಸರ್ಕಾರದ ಕ್ರಮದ ವಿರುದ್ಧ ಟ್ವೀಟ್‌ ಮಾಡಿ ಟೀಕಿಸಿದರು.

ಟ್ವೀಟ್‍ನಲ್ಲಿ ಏನಿದೆ?: ಹೇರಳವಾದ ಕಲ್ಲಿದ್ದಲು, ಹಾಗೂ ಉಷ್ಣ ಸ್ಥಾವರಗಳಲ್ಲಿ ಬಳಕೆಯಾಗದಷ್ಟು ಸಾಮರ್ಥ್ಯವಿದೆ. ಆದರೂ ದೇಶದಲ್ಲಿ ತೀವ್ರವಾದ ವಿದ್ಯುತ್ ಕೊರತೆ ಇದೆ. ಇದಕ್ಕೆಲ್ಲಾ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ. 60 ವರ್ಷಗಳ ಕಾಂಗ್ರೆಸ್ ಆಡಳಿತವೇ ಕಾರಣ.

ಕೇಂದ್ರ ಸಚಿವಾಲಯಗಳಲ್ಲಿ ಕಲ್ಲಿದ್ದಲು, ರೈಲ್ವೆ ಅಥವಾ ವಿದ್ಯುತ್‍ನ ಯಾವುದೇ ಅಸಮರ್ಥತೆ ಇಲ್ಲ. ಇವೆಲ್ಲವೂ ಹಿಂದಿನ ಕಾಂಗ್ರೆಸ್ ಮಂತ್ರಿಗಳ ಮೇಲೆ ಎಂದು ಇಲಾಖೆ ಆಪಾದನೆ ಮಾಡಿದೆ. ಇದನ್ನೂ ಓದಿ: ಪಂಜಾಬ್‍ನ ಪಾಕ್ ಗಡಿಯಲ್ಲಿ ‘ಮೇಡ್ ಇನ್ ಚೀನಾ’ ಡ್ರೋನ್ ಹೊಡೆದುರುಳಿಸಿದ ಬಿಎಸ್‍ಎಫ್

ಆದರೆ ಇದಕ್ಕೆಲ್ಲಾ ಸರ್ಕಾರ ಪರಿಪೂರ್ಣ ಪರಿಹಾರವನ್ನು ಕಂಡುಕೊಂಡಿದೆ. ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿ ಕಲ್ಲಿದ್ದಲು ರೇಕ್‍ಗಳನ್ನು ಚಲಾಯಿಸುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

ದೇಶಾದ್ಯಂತ ವಿದ್ಯುತ್ ಬೇಡಿಕೆ ತೀವ್ರಗೊಂಡಿದ್ದು ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈಲ್ವೆಯು ಕಲ್ಲಿದ್ದಲು ಸಾಗಿಸುವ ರೇಕ್‍ಗಳು ವಿದ್ಯುತ್ ಸ್ಥಾವರಗಳನ್ನು ವೇಗವಾಗಿ ತಲುಪಲು ಕಳೆದ ಎರಡು ವಾರಗಳಲ್ಲಿ ಪ್ರತಿದಿನ ಸುಮಾರು 16 ಮೇಲ್/ಎಕ್ಸ್ ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಿದೆ.

ಕಲ್ಲಿದ್ದಲು ಸಚಿವಾಲಯವು ಪ್ರಸ್ತುತ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಪ್ರತಿದಿನ 422 ಕಲ್ಲಿದ್ದಲು ರೇಕ್‍ಗಳನ್ನು ಓಡಿಸುವಂತೆ ರೈಲ್ವೆಗೆ ಮನವಿ ಮಾಡಿದೆ. ಆದರೆ ರೈಲ್ವೆ ಪ್ರತಿದಿನ 415 ಕಲ್ಲಿದ್ದಲು ರೇಕ್‍ಗಳನ್ನು ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ ಈಗ ಪ್ರತಿದಿನ 410 ರೇಕ್‍ಗಳು ಮಾತ್ರ ಸಂಚರಿಸುತ್ತಿದೆ.

ಪ್ರತಿ ರೇಕ್ ಸುಮಾರು 3,500 ಟನ್ ಕಲ್ಲಿದ್ದಲನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸುಧಾರಿಸಲು ಮುಂದಿನ ಎರಡು ತಿಂಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಮೂಲವನ್ನು ಉದ್ದೇಶಿಸಿ ಮಾಧ್ಯಮ ವರದಿ ಮಾಡಿದೆ.

Comments

Leave a Reply

Your email address will not be published. Required fields are marked *