ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

ಮಂಡ್ಯ: ಮೇವು ತುಂಬಿಕೊಂಡು ಬರುತ್ತಿದ್ದ ಎತ್ತಿನಗಾಡಿ ವಿಸಿ ನಾಲೆಗೆ ಪಲ್ಟಿಯಾಗಿ ಒಂದು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮತ್ತೊಂದು ಎತ್ತನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಿರಿಗೌಡ ತಮ್ಮ ಜಮೀನಿನಿಂದ ಎತ್ತಿನಗಾಡಿಯಲ್ಲಿ ಮೇವು ತುಂಬಿಕೊಂಡು ವಿಸಿ ನಾಲೆಯ ಏರಿಮೇಲೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಸಿ ನಾಲೆಗೆ ಹಾಕಿದ್ದ ಪಂಪ್ ಸೆಟ್ ಶಬ್ದಕ್ಕೆ ಬೆದರಿ ಎತ್ತುಗಳು ವಿಸಿ ನಾಲೆಯ ಕಡೆ ಏಕಾಏಕಿ ನುಗ್ಗಿದ ಎತ್ತುಗಳು ಗಾಡಿ ಸಮೇತ ಹರಿಯುತ್ತಿರುವ ನೀರಿನೊಳಗೆ ಬಿದ್ದಿವೆ.

ಈ ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ವಿಸಿ ನಾಲೆಗೆ ಜಿಗಿದು ಒಂದು ಎತ್ತಿನ ಮೂಗುದಾರವನ್ನು ಕತ್ತರಿಸಿದ್ದಾರೆ. ತಕ್ಷಣ ಆ ಎತ್ತು ಈಜಿ ದಡ ಸೇರಿದೆ. ಆದರೆ ಮತ್ತೊಂದು ಎತ್ತಿನ ಮೂಗುದಾರವನ್ನು ಕತ್ತರಿಸಲು ಸಾಧ್ಯವಾಗದಿದ್ದರಿಂದ ಎತ್ತು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ. ಅಪಘಾತದಲ್ಲಿ ರೈತ ಗಿರಿಗೌಡರಿಗೆ ತಲೆಯ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಾಯದೊಂದಿಗೆ ವಿಸಿ ನಾಲೆಯಲ್ಲಿ ಮುಳುಗಿದ್ದ ಎತ್ತು ಹಾಗೂ ಗಾಡಿಯನ್ನು ಹೊರತೆಗೆದಿದ್ದಾರೆ.

 

Comments

Leave a Reply

Your email address will not be published. Required fields are marked *