ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್ ಹುಲಿವೇಷ ಕುಣಿತ

ಉಡುಪಿ: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಗಣೇಶ ಚತುರ್ಥಿಯ ಸಂದರ್ಭ ಹುಲಿವೇಷದ ತಂಡದೊಂದಿಗೆ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದ್ದಾರೆ.

ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಗಣೇಶ ಚತುರ್ಥಿಯ ಪ್ರಯುಕ್ತ ಹುಲಿವೇಷದೊಂದಿಗೆ ಉಡುಪಿ ಪ್ರವಾಸಿ ಮಂದಿರದಲ್ಲಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ಶುಭಾಶಯ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಹುಲಿವೇಷ ತಂಡದವರು ಆಸ್ಕರ್ ಅವರಿಗೆ ತಮ್ಮ ಪ್ರದರ್ಶನ ನೀಡುತ್ತಿದ್ದಾಗ ಸ್ವಲ್ಪ ಹೊತ್ತು ವೀಕ್ಷಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಹುಲಿವೇಷದ ಜೊತೆಯಲ್ಲಿ ಮೊದಲು ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದರು. ನಂತರ ಆಸ್ಕರ್ ಫರ್ನಾಂಡಿಸ್ ಕೂಡಾ ಹುಲಿ ವೇಷಕ್ಕೆ ತಮ್ಮದೇ ಶೈಲಿಯಲ್ಲಿ ಹೆಜ್ಜೆ ಹಾಕಿದರು.

ಸ್ವತಃ ಹಲವಾರು ಪ್ರತಿಭೆಗಳನ್ನು ಹೊಂದಿರುವ ಆಸ್ಕರ್ ಫರ್ನಾಂಡಿಸ್ ಉತ್ತಮ ಯೋಗಪಟುವಾಗಿದ್ದು, ಓರ್ವ ಈಜುಗಾರರು ಕೂಡ ಹೌದು. ಅಲ್ಲದೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ತುಳು ಪದ್ಯವೊಂದನ್ನು ಹಾಡುವುದರ ಮೂಲಕ ಸದಸ್ಯರ ಗಮನ ಸೆಳೆದಿದ್ದರು. ಇದೀಗ ಹುಲಿವೇಷ ಕುಣಿದು ಮತ್ತೆ ಗಮನ ಸೆಳೆದಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂಎ ಗಫೂರ್, ಕಾಂಗ್ರೆಸ್ ನಾಯಕರಾದ ದಿನೇಶ್ ಪುತ್ರನ್, ನಾಗೇಶ್ ಉದ್ಯಾವರ, ವೀರ ಮಾರುತಿ ತಂಡದ ಅನಿಲ್ ಪಾಲನ್, ಪ್ರಸಾದ್ ಪಾಲನ್ ಹಾಗೂ ಇತರರು ಇದ್ದರು.

Comments

Leave a Reply

Your email address will not be published. Required fields are marked *