ನವಿಲು ಕುಕ್ಕಿ ಗಾಯಗೊಳಿಸಿದ್ದ ಅನಾಥ ಮಗುವಿಗೆ ಬರ್ತ್ ಡೇ ಸಂಭ್ರಮ- ಡಿಸಿ ರೋಹಿಣಿ ಸಿಂಧೂರಿ ಸಾಕ್ಷಿ

– ಅಮೆರಿಕಾ ವಾಸಿಯಾಗಲಿದ್ದಾಳೆ ಅನ್ವಿತಾ

ಹಾಸನ: ಹೆತ್ತವರಿಂದ ದೂರವಾಗಿದ್ದ ಮಕ್ಕಳ ಹುಟ್ಟುಹಬ್ಬವನ್ನು ತವರು ಚಾರಿಟಿ ಸಂಸ್ಥೆಯೂ ವಿಜೃಂಭಣೆಯಿಂದ ಆಚರಣೆ ಮಾಡಿದ್ದು, ಇದಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಸಾಕ್ಷಿಯಾಗಿದ್ದರು.

2017 ಜುಲೈ 13ರಂದು ಜಿಟಿಜಿಟಿ ಮಳೆಯಲ್ಲಿ ಮುಳ್ಳಿನ ಪೊದೆಯಲ್ಲಿ ನವಜಾತ ಶಿಶುವೊಂದು ಅಳುವ ಶಬ್ದ ಕೇಳಿಸಿತ್ತು. ಬಳಿಕ ಮಹಿಳೆ ಅಲ್ಲಿ ಹೋಗಿ ನೋಡಿದಾಗ ಹೆತ್ತವರಿಂದ ಬೇಡವಾದ ಮಗುವಿನ ಪತೆಯಾಗಿತ್ತು. ಆ ಅನಾಥ ನವಜಾತ ಶಿಶುವನ್ನು ನವಿಲುಗಳು ಕುಕ್ಕಿ ಗಾಯಗೊಳಿಸಿ ಸಾವು ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ಇತ್ತು. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದರು. ಈಗ ಆ ಮಗುವಿನ ಹೆಸರು “ಅನ್ವಿತಾ”. ಈ ಜುಲೈ 13ಕ್ಕೆ ಒಂದು ವರ್ಷದ ಹುಟ್ಟಿದ ದಿನವಾಗಿದ್ದು, ಮುದ್ದು ಕಂದಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ.

ಜಿಲ್ಲೆಯ ಹೊಳೇನರಸೀಪುರದ ಶ್ರೀರಾಮದೇವರ ಅಣೆಕಟ್ಟೆ ಬಳಿ ಅನಾಥವಾಗಿ ಬಿದ್ದಿದ್ದ ಶಿಶುವನ್ನು ಮೊದಲು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಸಾರ್ವಜನಿಕರು ಮಾನವೀಯತೆ ಮೆರೆದಿದ್ದರು. ನಂತರ ಪಬ್ಲಿಕ್ ಟಿವಿಯಲ್ಲಿಯೂ ಮಗುವಿನ ಕುರಿತು ಸುದ್ದಿ ಪ್ರಸಾರವಾಗಿತ್ತು. ತಕ್ಷಣ ಜಾಗೃತರಾಗಿದ್ದ ಶಿಶು ಕಲ್ಯಾಣ ಸಮಿತಿಯವರು ಮಗುವನ್ನು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದರು.

ಜಿಲ್ಲಾಸ್ಪತ್ರೆಯ ವೈದ್ಯರ ವಿಶೇಷ ಆರೈಕೆಯಲ್ಲಿ ಐಸಿಯುನಲ್ಲಿದ್ದ ಅನ್ವಿತಾ ಸಾವನ್ನು ಗೆದ್ದ ಬಂದಳು. ನಂತರ ನಗರದ ತವರು ಚಾರಿಟಿಯಲ್ಲಿ ಬೆಳೆದ ಮಗುವಿಗೆ ಇದೀಗ ಒಂದು ವರ್ಷವಾಗಿದೆ. ತವರು ಚಾರಿಟಿ ಮತ್ತು ಜಿಲ್ಲಾಡಳಿತದ ವತಿಯಿಂದ ಅನ್ವಿತಾಳ ಒಂದು ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ವತಃ ತಮ್ಮ ಮಕ್ಕಳೊಂದಿಗೆ ಅನ್ವಿತಾಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಇಷ್ಟೆ ಅಲ್ಲದೇ ಹೆತ್ತವರಿಗೆ ಬೇಡವಾದ ಅನ್ವಿತಾ ಈಗ ಪ್ರಪಂಚ ದೊಡ್ಡಣ್ಣ ಅಮೆರಿಕಾ ವಾಸಿಯಾಗಲಿದ್ದಾಳೆ. ಹೌದು ಅಮೆರಿಕಾ ಮೂಲ ದಂಪತಿ ದತ್ತು ಪಡೆದು ವಿಸಾಗಾಗಿ ಕಾಯುತ್ತಿದ್ದು, ಅದು ಕೈಗೆ ಸಿಕ್ಕಿದ ಕೂಡಲೇ ಅನ್ವಿತಾ ಅಮೆರಿಕಾ ವಾಸಿಯಾಗಲಿದ್ದಾಳೆ.

Comments

Leave a Reply

Your email address will not be published. Required fields are marked *