ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

ಕೊಯಮತ್ತೂರು: ಮೆದುಳು ನಿಷ್ಕ್ರಿಯಗೊಂಡಿದ್ದ 56 ವರ್ಷದ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಕೊಯಮತ್ತೂರಿನ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಮೃತಪಡುವ ಮೊದಲು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

ನವೆಂಬರ್ 30 ರಂದು ಇವರು ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಸಹ ಉದ್ಯೋಗಿಗಳು ಕೂಡಲೇ ಇವರನ್ನು ಸಮೀಪದ ಕೆ.ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಪರೀಕ್ಷೆ ಮಾಡಿದ ಬಳಿಕ ಅವರಿಗೆ ಅಧಿಕ ರಕ್ತ ಒತ್ತಡ, ಕಾರ್ಡಿಯೊ-ವ್ಯಾಸ್ಕೂಲರ್ (ಹೃದಯ-ರಕ್ತನಾಳದ ಸಮಸ್ಯೆ) ಮತ್ತು ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ವೈದ್ಯರಿಗೆ ತಿಳಿಯಿತು.

ಪರಿಣಿತ ವೈದ್ಯರ ತಂಡವೊಂದು ಭಾನುವಾರ ಆಕೆಯನ್ನ ಆಪರೇಷನ್ ಮಾಡಿ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆಯ ಮೆದುಳು ನಿಷ್ಕ್ರಿಯವಾಯಿತು. ಅಷ್ಟೇ ಅಲ್ಲದೇ ಮತ್ತೆ ಅದನ್ನು ಸರಿ ಮಾಡಲು ಸಾಧ್ಯವಾಗದಷ್ಟು ಹಾನಿಯಾಯಿತು ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ ಭಕ್ತವತ್ಸಲಂ ಹೇಳಿದರು.

ವೈದ್ಯರು ಮತ್ತೆ ಎರಡು ಪರೀಕ್ಷೆಗಳನ್ನು ಮಾಡಿ ಸಂಜೆ ಹೊತ್ತಿಗೆ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದ್ದಾರೆ. ನಂತರ ಮಹಿಳೆಯ ಮಗ ಮತ್ತು ಮಗಳ ಇಬ್ಬರ ಅನುಮತಿಯನ್ನು ಪಡೆದು ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಆಸ್ಪತ್ರೆ ಪಡೆದುಕೊಂಡಿತು.

ಮಹಿಳೆಯಿಂದ ಪಡೆದುಕೊಂಡ ಅಂಗಾಂಗಗಳನ್ನು, ತಮಿಳು ನಾಡಿನ ಟ್ರಾನ್ಸ್ ಪ್ಲಾಂಟ್ ಅಥಾರಿಟಿ, ಯಕೃತ್ತು, ಮತ್ತು ಒಂದು ಕಿಡ್ನಿ ಕೆ.ಜಿ. ಆಸ್ಪತ್ರೆಗೆ, ಮತ್ತೊಂದು ಕಿಡ್ನಿಯನ್ನು ಶ್ರೀ ರಾಮಕೃಷ್ಣ ಆಸ್ಪತ್ರೆಗೆ, ಕಣ್ಣುಗಳನ್ನು ಅರವಿಂದ್ ಕಣ್ಣಿನ ಆಸ್ಪತ್ರೆಗೆ, ಚರ್ಮ ಮತ್ತು ಎಲುಬುಗಳನ್ನು ಗಂಗಾ ಆಸ್ಪತ್ರೆ, ಹೃದಯ ಮತ್ತು ಶ್ವಾಸಕೋಶ ಫೊರ್ಟಿಸ್ ಆಸ್ಪತ್ರೆ/ಗ್ಲೋಬಲ್ ಆಸ್ಪತ್ರೆ ಹಸ್ತಾಂತರಿಸಲಾಗುವುದು. ಇದರಿಂದ 9 ಜನರ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಭಕ್ತವತ್ಸಲಂ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *