ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಪಾಕ್‌ : ಭಾರತ

ನವದೆಹಲಿ: ಭಾರತದ ಏರ್‌ಬೇಸ್‌, ಎಸ್‌- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ (S-400 missile system) ಸುರಕ್ಷಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ. ಪಾಕ್‌ ತನ್ನ ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಎಂದು ಎಂದು ಭಾರತ ಸರ್ಕಾರ ತಿಳಿಸಿದೆ.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಶುಕ್ರವಾರ ಸಂಜೆಯಿಂದ ಇಂದು ಬೆಳಗ್ಗಿನವರೆಗೆ ನಡೆದ ಘಟನೆಯನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ ಎನ್ನುವುದಕ್ಕೆ ಸುದ್ದಿಗೋಷ್ಠಿಯಲ್ಲಿ ಸದ್ಯ  ಚಿತ್ರಗಳನ್ನು ತೋರಿಸಲಾಯಿತು. ಇದನ್ನೂ ಓದಿ: ಅಸಿಮ್ ಮುನೀರ್‌ನಿಂದ ದೇಶ ನಾಶ – ರೊಚ್ಚಿಗೆದ್ದ ಪಾಕ್‌ ಜನ

ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಪಾಕಿಸ್ತಾನದ ಸೇನೆಯು ತನ್ನ ಪಡೆಗಳನ್ನು ಗಡಿ ಭಾಗಕ್ಕೆ ರವಾನಿಸಲು ಮುಂದಾಗಿದೆ.  ಪಾಕಿಸ್ತಾನದ ಮುರಿದ್, ರಫೀಕಿ, ನೂರ್ ಖಾನ್ (ಚಕ್ಲಾಲಾ), ರಹಿಮ್ಯಾರ್, ಸುಕ್ಕೂರ್ (ಭೋಲಾರಿ) ಮತ್ತು ಚುನಿಯನ್ ಏರ್‌ಬೇಸ್‌ಗಳನ್ನು ಧ್ವಂಸ ಮಾಡಲಾಗಿದೆ.

ಪಾಕಿಸ್ತಾನವು ಉಧಂಪುರ, ಪಠಾಣ್‌ಕೋಟ್ ಮತ್ತು ಬಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳು ಮತ್ತು ಇತರ 23 ಭಾರತೀಯ ನಗರಗಳ ಮೇಲೆ ದಾಳಿ ಮಾಡಿತ್ತು. ಕ್ಷಿಪಣಿ ಡ್ರೋನ್‌ ದಾಳಿಗಳನ್ನು ನಾವು ತಟಸ್ಥಗೊಳಿಸಿದ್ದೇವೆ.

ಪಾಕ್‌ ಸೇನೆ ಭಾರತದ ನಾಗರಿಕರನ್ನು, ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಪ್ರಯಾಣಿಕ ವಿಮಾನವನ್ನು ಗುರಾಣಿಯನ್ನಾಗಿ ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ನಮ್ಮ ವಿರುದ್ಧ ಪಾಕ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಭಾರತ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ಪಾಕ್‌ ಹೇಳಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ನಮ್ಮ ಮೇಲೆ ಯಾರು ದಾಳಿ ನಡೆಸುತ್ತಿದ್ದಾರೆ ಎನ್ನುವುದು ಅಫ್ಘಾನಿಸ್ತಾನಕ್ಕೆ ಜನರಿಗೆ ಗೊತ್ತಿದೆ.