ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಈರುಳ್ಳಿ ಲಾರಿ ಪಲ್ಟಿ- 7 ರೈತರಿಗೆ ಗಾಯ

ಹಾವೇರಿ: ಈರುಳ್ಳಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿ ಏಳು ರೈತರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.

ಗಾಯಗೊಂಡ ರೈತರನ್ನ ಶಿವಲಿಂಗಗೌಡ ಪಾಟೀಲ(45), ಶಿವಣಪ್ಪ ವಾಲ್ಮೀಕಿ(38), ಮಲ್ಲಪ್ಪ ಟಕ್ಕೇದ(49), ಶಶಿಧರ ಟಕ್ಕೇದ(36), ಶಿವನಗೌಡ ಪಾಟೀಲ(50), ಬಸನಗೌಡ ಪಾಟೀಲ(46) ಮತ್ತು ನಿಂಗಪ್ಪ ಬಳಗೋಡ(39) ಎಂದು ಗುರುತಿಸಲಾಗಿದೆ. ಗಾಯಾಳುಗಳು ಗದಗ ಜಿಲ್ಲೆ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ರೈತರು ಎನ್ನಲಾಗಿದೆ.

ತಮ್ಮ ಗ್ರಾಮದಿಂದ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ತೆರಳುತ್ತಿದ್ದ ವೇಳೆ ಲಾರಿ ಚಾಲಕ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಲಾರಿ ಉರುಳಿ ಬಿದ್ದಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅವಘಡದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಕೂಡಲೇ ಬೇರೆ ಲಾರಿ ಮೂಲಕ ಈರುಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಲಾರಿ ಏಜೆನ್ಸಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *