ಕಾವೇರಿ ನದಿಯಲ್ಲಿ ಕೊಚ್ಚಿಹೋದ ಯುವಕ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಮತ್ತೊಬ್ಬ ಯುವಕ!

ಮಂಡ್ಯ/ ಹೈದರಾಬಾದ್: ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿಹೋದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಬಳಿಯ ಗೂಳಿತಿಟ್ಟು ಬಳಿ ನಡೆದಿದೆ.

ಇಂದು ಸುಪ್ರಸಿದ್ಧ ಪಕ್ಷಿಧಾಮವಾದ ರಂಗನತಿಟ್ಟು ವೀಕ್ಷಿಸಲು ಇಬ್ಬರು ಯುವಕರು ಆಗಮಿಸಿದ್ದಾರೆ. ಈ ವೇಳೆ ರಂಗನ ತಿಟ್ಟು ಬಳಿಯ ಗೂಳಿತಿಟ್ಟಿನ ಬಳಿ ಕೆಆರ್‍ಎಸ್‍ನಿಂದ ನದಿಗೆ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಇದರಲ್ಲಿ ಓರ್ವ ಯುವಕ ನದಿ ಮಧ್ಯೆ ಸಿಲುಕಿ, ತಾಳೆ ಗಿಡದ ಸಹಾಯದಿಂದ ಪಾರಾಗಿದ್ದು, ರಕ್ಷಣೆ ಮಾಡುವಂತೆ ಅಂಗಲಾಚುತ್ತಿದ್ದಾನೆ.

ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಇವರಲ್ಲಿ ಓರ್ವ ಯುವಕ ನದಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ.

15 ಮಂದಿ ನಾಪತ್ತೆ:ಆಂಧ್ರಪ್ರದೇಶದ ಪೂರ್ವ ಗೋಧಾವರಿಯಲ್ಲಿ ಪ್ರಯಾಣಿಕರ ದೋಣಿಯೊಂದು ಮುಳುಗಿದ ಪರಿಣಾಮ 15 ಮಂದಿ ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದು, ಬಹುತೇಕ ಮಂದಿ ವಿದ್ಯಾರ್ಥಿಗಳೇ ಇದ್ದರು ಎಂದು ತಿಳಿದು ಬಂದಿದೆ.

ವರದಿಯ ಪ್ರಕಾರ ಗೋಧಾವರಿ ನದಿಗೆ ಕಟ್ಟಲಾಗಿದ್ದ ಸೇತುವೆಯ ಕಂಬಕ್ಕೆ ದೋಣಿ ಗುದ್ದಿದ್ದರಿಂದ ಅವಘಡ ಸಂಭವಿಸಿದ್ದು, ನಾಪತ್ತೆಯಾದರವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ, ಘಟನೆ ಸಂಬಂಧ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

Comments

Leave a Reply

Your email address will not be published. Required fields are marked *