ಸಿಗರೇಟ್ ಸೇದೋ ವಿಚಾರದಲ್ಲಿ ಜಗಳ -ಮನೆ ಮಾಲೀಕನನ್ನು ಡ್ರ್ಯಾಗರ್‍ನಿಂದ ಇರಿದು ಕೊಲೆಗೈದ್ರು

ಬೆಂಗಳೂರು: ಸಿಗರೇಟ್ ಸೇದುವ ವಿಚಾರದಲ್ಲಿ ನಡೆದ ಜಗಳದಲ್ಲಿ ಮನೆ ಮಾಲೀಕನನ್ನೆ ಡ್ರ್ಯಾಗರ್ ನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶಾಂತಿನಗರ ಪುಡ್ ಗೋಡೌನ್ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಹರೀಶ್ ಕೊಲೆಯಾದ ದುರ್ದೈವಿ. ತಡರಾತ್ರಿ 12 ಗಂಟೆ ಸುಮಾರಿಗೆ ಹರೀಶ್ ಮನೆಯ ಬಳಿ ನಾಲ್ವರ ಗುಂಪು ಸಿಗರೇಟು ಸೇದುತ್ತಾ ಕುಡಿದು ಗಲಾಟೆ ಮಾಡಿದ್ದಾರೆ. ಮನೆಯಿಂದ ಹೊರಬಂದ ಹರೀಶ್ ಎಲ್ಲರನ್ನೂ ದೂರ ಹೋಗುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ನಾಲ್ವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ.

ಮತ್ತೆ ಸುಮಾರು 20 ಜನರನ್ನು ಕರೆಸಿಕೊಂಡ ದುಷ್ಕರ್ಮಿಗಳು ಹರೀಶ್ ಕುತ್ತಿಗೆಗೆ ಡ್ರ್ಯಾಗರ್ ನಿಂದ ಇರಿದು ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೀಶ್ ಕಾಂಟ್ರಾಕ್ಟರ್ ಆಗಿ ಮತ್ತು ಸ್ಥಳೀಯ ಮುಖಂಡರಾಗಿದ್ದರು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *