ಇವತ್ತು ರಾಜ್ಯದಲ್ಲಿ ಒಂದೇ ಕೊರೊನಾ ಪ್ರಕರಣ ದಾಖಲು

-24 ಗಂಟೆಯಲ್ಲಿ 19 ಮಂದಿ ಡಿಸ್ಚಾರ್ಜ್

ಬೆಂಗಳೂರು: ಕೊರೊನಾ ಕಪಿಮುಷ್ಟಿಗೆ ಸಿಲುಕಿರುವ ರಾಜ್ಯದಲ್ಲಿ ಇಂದು ಒಂದೇ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ.

ಮಂಗಳೂರಿನಲ್ಲಿ ಕೊರೊನಾದಿಂದ ಮೃತ ವೃದ್ಧೆ ದಾಖಲಾಗಿದ್ದ ಆಸ್ಪತ್ರೆಯ ಆಯಾ (ರೋಗಿ ನಂಬರ್ 501)ಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಮಹಿಳೆಯನ್ನು ಮಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

47 ವರ್ಷದ ಮಹಿಳೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಿವಾಸಿಯಾಗಿದ್ದಾರೆ. ಏಪ್ರಿಲ್ 21ರಂದು ಮೃತ ವೃದ್ಧೆ (ರೋಗಿ ನಂಬರ್ 432) ಸಂಪರ್ಕದಲ್ಲಿದ್ದರು. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಬಂಟ್ವಾಳದ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದರು. ವೃದ್ಧೆ ಸಾವನ್ನಪ್ಪಿದ್ದ ಬಳಿಕ ಆಸ್ಪತ್ರೆಯ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು.

ದಕ್ಷಿಣ ಕನ್ನಡದಲ್ಲಿ ಒಟ್ಟು 19 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 12 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ 5 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಬರೋಬ್ಬರಿ 26 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಇದರಲ್ಲಿ ಬೆಂಗಳೂರಿನಲ್ಲಿ 13 ಮಂದಿಗೆ ಸೋಂಕು ತಗುಲಿತ್ತು. 13ರಲ್ಲಿ ಒಂಬತ್ತು ಮಂದಿ ಬಿಹಾರ ಮೂಲದ ಕಾರ್ಮಿಕನ ಸಂಪರ್ಕದಲ್ಲಿದ್ದವರೇ ಆಗಿದ್ದರು. ಹೊಂಗಸಂದ್ರ ಬಿಹಾರ ಮೂಲದ ಕಾರ್ಮಿಕನಿಂದ ಇದುವರೆಗೂ 29 ಮಂದಿ ಸೋಂಕು ಹರಡಿದೆ.

Comments

Leave a Reply

Your email address will not be published. Required fields are marked *