ಬೆಂಗ್ಳೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ – ವ್ಯಕ್ತಿ ಬಲಿ, ದೇಹ ಛಿದ್ರ

ಬೆಂಗಳೂರು: ವೈಯಾಲಿಕಾವಲ್ ನಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ವೆಂಕಟೇಶ್ ಸ್ಫೋಟದಿಂದ ಸಾವನ್ನಪ್ಪಿದ ವ್ಯಕ್ತಿ. ಸ್ಫೋಟದ ರಭಸಕ್ಕೆ ದೇಹದ ಕತ್ತು ಮತ್ತು ಕೈ ಛಿದ್ರಗೊಂಡಿದೆ. ಸ್ಫೋಟಕ್ಕೆ ಕಾರಣವಾದ ವಸ್ತು ಯಾವುದು ಎನ್ನುವುದು ತಿಳಿದುಬಂದಿಲ್ಲ.

ಸ್ಫೋಟ ಸಂಭವಿಸಿದ ಕೂಡಲೇ ಸ್ಥಳಕ್ಕೆ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಬಾಂಬ್ ನಿಷ್ಕ್ರೀಯ ದಳ, ವಿಧಿ ವಿಜ್ಞಾನ ತಂಡ(ಎಫ್‍ಎಸ್‍ಎಲ್) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಭೇಟಿ ನೀಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಬೆಳಗ್ಗೆ 9:15ಕ್ಕೆ ಸ್ಫೋಟ ಸಂಭವಿಸಿದೆ. ಶಾಸಕ ಮುನಿರತ್ನ ಅವರ ಕಚೇರಿ ಬಳಿ ಸ್ಫೋಟಗೊಂಡಿದೆ. ಕಚೇರಿಯ ಒಳಗೂ, ಹೊರಗೂ ಆಗಿಲ್ಲ. ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಎಫ್‍ಎಸ್‍ಎಲ್ ತಂಡ ಪರಿಶೀಲನೆ ನಡೆಸಿದ ನಂತರ ನಿಜವಾದ ಸಂಗತಿ ಗೊತ್ತಾಗಲಿದೆ. ವೆಂಕಟೇಶ್ ದೋಬಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿಸಿದರು.

ಶಾಸಕ ಮುನಿರತ್ನ ಪ್ರತಿಕ್ರಿಯಿಸಿ, ಊಹಾಪೋಹದ ಬಗ್ಗೆ ಚರ್ಚೆ ಮಾಡುವುದು ಬೇಡ. ವೆಂಕಟೇಶ್ ತಂದೆ ನನ್ನ ತಂದೆ ಬಾಲ್ಯ ಸ್ನೇಹಿತರು. ನಾವು ಕೂಡ ಜೊತೆಯಲ್ಲೇ ಬೆಳೆದಿದ್ದೇವೆ. ಅವನಿಗೆ ಹೀಗಾಗಿರೋದು ಬಹಳ ನೋವಿದ್ದು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ರಾಜಕಾರಣಿ ಮನೆ ಬಳಿ ಆಗಿದೆ ಎನ್ನುವ ಊಹಾಪೋಹ ಬೇಡ ಎಂದು ಹೇಳಿದರು.

ರಾಸಾಯನಿಕ ಒಂದು ಸ್ಫೋಟಗೊಂಡಿದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ರಾಸಾಯನಿಕ ಯಾವುದು ಎನ್ನುವುದನ್ನು ತಿಳಿಯಲು ಪೊಲೀಸರು ಈಗ ವೈದ್ಯರ ಮೊರೆ ಹೋಗಿದ್ದಾರೆ.

Comments

Leave a Reply

Your email address will not be published. Required fields are marked *