ಹಳಿ ದಾಟುವಾಗ ರೈಲು ಡಿಕ್ಕಿ – ಎರಡು ಹಸು, ವೃದ್ಧ ಸಾವು

ರಾಮನಗರ: ಹಳಿ ದಾಟುವ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಹಸುಗಳು ಹಾಗೂ ಓರ್ವ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರಾಮನಗರ ತಾಲೂಕಿನ ಬಿಡದಿ ಪಟ್ಟಣದ ಇಂದಿರಾನಗರ ನಿವಾಸಿ ರುದ್ರಪ್ಪ(60) ರೈಲಿಗೆ ಸಿಲುಕಿ ಸಾವನ್ನಪ್ಪಿದ ವೃದ್ಧ. ಜೀವಕ್ಕೆ ಆಧಾರವಾಗಿದ್ದ ಎರಡು ಸೀಮೆ ಹಸುಗಳನ್ನು ದಿನನಿತ್ಯ ಮೇಯಿಸಿಕೊಂಡು ಬರುವ ಕಾಯಕವನ್ನ ರುದ್ರಪ್ಪ ಮಾಡುತ್ತಿದ್ದರು. ಸೋಮವಾರ ಕೂಡಾ ಹಸುಗಳನ್ನು ಮೇಯಿಸಲು ಹೋಗಿದ್ದ ರಾಮಪ್ಪ ಸಂಜೆ ಆಗುತ್ತಿದ್ದಂತೆ ಮನೆಯ ಕಡೆಗೆ ಎರಡು ಹಸುಗಳನ್ನು ಕರೆದುಕೊಂದು ಬರುತ್ತಿದ್ದರು. ತನ್ನ ಮನೆಯ ಕಡೆಗೆ ಹೊರಡುವ ಅವಸರದಲ್ಲಿದ್ದ ರುದ್ರಪ್ಪ ಅವರಿಗೆ ಹಳಿ ದಾಟುವ ವೇಳೆ ಮೈಸೂರಿನಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಕಾಚಿಗುಡ ಎಕ್ಸ್‍ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಎರಡು ಹಸುಗಳು ಹಾಗೂ ರುದ್ರಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೈಲು ಹಸುಗಳಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಒಂದು ಹಸುವಿನ ದೇಹ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು, ಮತ್ತೊಂದು ಹಸುವಿನ ಕುತ್ತಿಗೆ ಹಾಗೂ ಹೊಟ್ಟೆಯ ಭಾಗದಲ್ಲಿ ಆಳವಾದ ಗಾಯವಾದ ಕಾರಣ ಕರುಳು ಹೊರಬಂದು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ರೈಲಿನ ಹೊಡೆತಕ್ಕೆ ರುದ್ರಪ್ಪನ ದೇಹ ರೈಲು ಹಳಿಯ ಮೇಲೆ ಬಿದ್ದು ರೈಲಿನ ಗಾಲಿಗಳು ಹರಿದ ಪರಿಣಾಮ ಛಿದ್ರ ಛಿದ್ರವಾಗಿದ್ದು, ದೇಹದ ಭಾಗಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹೋಗಿವೆ.

ಘಟನೆ ಸಂಬಂಧ ಸ್ಥಳಕ್ಕೆ ಚನ್ನಪಟ್ಟಣ ರೈಲ್ವೆ ಪೊಲೀಸರು ಹಾಗೂ ಬಿಡದಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೆಡೆ ಜೀವನಾಧಾರವಾಗಿದ್ದ ಹಸುಗಳು ಕಳೆದುಕೊಂಡ ದುಃಖವಾದರೆ, ಮತ್ತೊಂದೆಡೆ ಮನೆಯ ಮಾಲೀಕನೇ ಸಾವನ್ನಪ್ಪಿರುವುದಕ್ಕೆ ಕುಟುಂಬಸ್ಥರ ಆಕ್ರಂದನವನ್ನು ಮುಗಿಲು ಮುಟ್ಟುದೆ.

Comments

Leave a Reply

Your email address will not be published. Required fields are marked *