ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ಶಾಸಕ ತರಾಟೆ

ರಾಯಚೂರು: ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಯಚೂರಿನ 270 ಜನರಿಗೆ 3 ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಗುರ್ಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ನಿರಾಶ್ರಿತರಿಗೆ ಸಿಬ್ಬಂದಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾಗಿದ್ದರು.

ಸಿಬ್ಬಂದಿ ಮಕ್ಕಳಿಗೆ ಅರೆಬೆಂದ ಅನ್ನ ಸಾಂಬರ್ ನೀಡಲು ಮುಂದಾದಾಗ ಶಾಸಕ ಬಸನಗೌಡ ದದ್ದಲ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮತ್ತೊಮ್ಮೆ ಅಡುಗೆ ಮಾಡಿ ಊಟ ಬಡಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಶಾಲಾ ಬಿಸಿಯೂಟ ಸಿಬ್ಬಂದಿಯಿಂದಲೇ ಅಡುಗೆ ಮಾಡಿಸುತ್ತಿರುವುದ್ದನ್ನು ನೋಡಿ ಬಸನಗೌಡ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು.

ಕೃಷ್ಣ ನದಿಯಲ್ಲಿ ಪ್ರವಾಹ ಹೆಚ್ಚಳ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ 4,51,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ನದಿ ತೀರದ ಹಲವು ದೇವಾಲಯಗಳು ಜಲಾವೃತವಾಗಿವೆ. ನೀರು ಹೆಚ್ಚಳ ಹಿನ್ನೆಲೆ ದೇವದುರ್ಗದ ಹೀರೆರಾಯಕುಂಪಿ ಗ್ರಾಮಕ್ಕೂ ನೀರು ನುಗ್ಗುವ ಭೀತಿಯಿದೆ. ಈಗಾಗಲೇ ಗ್ರಾಮದ ಜಮೀನುಗಳು ಜಲಾವೃತವಾಗಿವೆ. ಹೀಗಾಗಿ ಗ್ರಾಮದ 40 ಮನೆಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಜಮೀನಿನಲ್ಲಿನ ಬೆಳೆ ಕಳೆದುಕೊಂಡ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

Comments

Leave a Reply

Your email address will not be published. Required fields are marked *