ತಿಹಾರ್ ಜೈಲಿನಲ್ಲಿರುವ ಡಿಕೆಶಿಗೆ ಸಿಗುತ್ತಾ ಅಜ್ಜಯ್ಯನ ಆರ್ಶೀರ್ವಾದ?

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ತಾವು ನಂಬುವ ದೇವ ಮಾನವ ನೊಣವಿನ ಕೆರೆ ಅಜ್ಜಯ್ಯ ಅವರ ಆಶೀರ್ವಾದ ಸಿಕ್ಕರೆ ಎಲ್ಲಾ ಸಂಕಷ್ಟ ದೂರವಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಷ್ಟದಲ್ಲಿರುವ ಡಿಕೆ ಶಿವಕುಮಾರ್ ಗೆ ಧೈರ್ಯ ತುಂಬಲು ಅಜ್ಜಯ್ಯ ವಿಮಾನ ಹತ್ತಲು ತೀರ್ಮಾನಿಸಿದ್ದಾರೆ.

ಜೈಲಿನಲ್ಲಿರುವ ಡಿಕೆಶಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ತಮಗೆ ಸಮಾಧಾನ ಆಗಬೇಕಾದರೆ ನೊಣವಿನಕೆರೆ ಅಜ್ಜಯ್ಯನ ಆಶೀರ್ವಾದ ಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಡಿಕೆಶಿ ಆಶಯದಂತೆ ಅಜ್ಜಯ್ಯ ಅಕ್ಟೋಬರ್ 25 ರಂದು ದೆಹಲಿಗೆ ಹೋಗಿ ಡಿಕೆಶಿಯನ್ನು ಭೇಟಿ ಮಾಡುವ ಸಾಧ್ಯತೆಯದೆ. 25 ರಂದು ಡಿ.ಕೆ ಶಿವಕುಮಾರ್ ಕೋರ್ಟಿಗೆ ಹಾಜರಾಗಲಿದ್ದಾರೆ. ಅಂದೇ ನೊಣವಿನಕೆರೆ ಅಜ್ಜಯ್ಯರನ್ನ ಕೋರ್ಟ್ ಆವರಣದಲ್ಲಿ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಅಜ್ಜಯ್ಯ ಕೂಡ ಬಹುತೇಕ ಅ.25 ರಂದು ದೆಹಲಿ ನ್ಯಾಯಾಲಯದಲ್ಲಿ ಡಿಕೆಶಿಯನ್ನು ಭೇಟಿಯಾಗಿ ಧೈರ್ಯ ತುಂಬಲಿದ್ದಾರೆ. ಕೊನೆ ಗಳಿಗೆಯಲ್ಲಿ ದೆಹಲಿ ಪ್ರವಾಸ ಸಾಧ್ಯವಾಗದಿದ್ದರೆ ಮುಂದಿನ ಕೋರ್ಟ್ ದಿನಾಂಕದಂದು ಭೇಟಿ ಮಾಡಿಯೇ ಮಾಡುವುದಾಗಿ ಡಿಕೆಶಿ ಆಪ್ತರಿಗೆ ಅಜ್ಜಯ್ಯ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಡಿಕೆಶಿಯ ಬಹು ನಂಬಿಕೆಯ ದೇವಮಾನವ ನೊಣವಿನಕೆರೆ ಅಜ್ಜಯ್ಯ ಡಿ.ಕೆ ಶಿವಕುಮಾರ್ ಭೇಟಿಗೆ ದೆಹಲಿಗೆ ಹೊರಟಿದ್ದಾರೆ. ಸಂಕಷ್ಟದಲ್ಲಿರುವ ತಮ್ಮ ಭಕ್ತನಿಗೆ ಆಶೀರ್ವದಿಸಲು ಹೊರಟಿರುವ ಅಜ್ಜಯ್ಯ ಅಕ್ಟೋಬರ್ 25 ರಂದೇ ಭೇಟಿ ಮಾಡುತ್ತಾರಾ ಅಥವಾ ತದನಂತರದ ಕೋರ್ಟ್ ಹಾಜರಿ ದಿನದಂದು ಭೇಟಿ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *