ಯಾರ ಬೆಂಬಲಕ್ಕೂ ನಿಂತಿಲ್ಲ, ಸದ್ಯಕ್ಕೆ ತಟಸ್ಥ: ಜಿಟಿಡಿ

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ನನಗೆ ಮೂರು ಪಕ್ಷದವರು ಬೆಂಬಲ ಕೇಳಿದ್ದಾರೆ. ಆದರೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನಂತರ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಅಲ್ಲದೆ ಮೂರು ಪಕ್ಷಗಳ ಅಭ್ಯರ್ಥಿಗಳು ಬೆಂಬಲ ಕೇಳಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ ಅಷ್ಟೆ. ಈ ಹಿಂದೆ ಹೇಳಿದಂತೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ ಎಂದರು.

ನಾನು ಸಾಕಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಜಿ.ಟಿ.ದೇವೆಗೌಡರ ಆಸ್ತಿ ಎಷ್ಟು, ಹತ್ತು ವರ್ಷದ ಹಿಂದೆ ರಾಜಕೀಯಕ್ಕೆ ಬಂದವರ ಆಸ್ತಿ ಎಷ್ಟಿದೆ ಎಂಬುದನ್ನು ಯಾರು ನೋಡುವುದಿಲ್ಲ. ಹಾಗೇ ರಾಜಕೀಯದಲ್ಲಿ ಪ್ರಾಮಾಣಿಕತೆ ಎಲ್ಲಿದೆ ಎಂದು ದುಡ್ಡು ಮಾಡುವವರು ಕೇಳುತ್ತಾರೆ. ಈಗಿನ ರಾಜಕೀಯ ಯಾರಿಗೂ ಬೇಡ, ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ನವರು ಯಾವ ರೀತಿ ಕಚ್ಚಾಡಿದರು. ಆದರೆ ಫಲಿತಾಂಶ ಬಂದ ನಂತರ ಲವರ್ ತರಹ ತಬ್ಬಿಕೊಂಡರು ಹೀಗೆ ಎಲ್ಲವೂ ಅನಿರೀಕ್ಷಿತ ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ಮಾಜಿ ಸಿಎಂ ಕುಮಾರಸ್ವಾಮಿಯವರು ಯಡಿಯೂರಪ್ಪನವರ ಸರ್ಕಾರ ಬೀಳಿಸುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಯಡಿಯೂರಪ್ಪ ಧನ್ಯವಾದ ಅಂತಾರೆ. ಈ ರೀತಿ ಪರಿಸ್ಥಿತಿ ಇರುವಾಗ ಹೋರಾಟ ಮಾಡಿದವರ ಕತೆ ಏನು? ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ತತ್ವ ಸಿದ್ಧಾಂತ ಇಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *