ಕನಕಪುರ, ರಾಮನಗರದಲ್ಲಿ ಮೆಡಿಕಲ್‌ ಕಾಲೇಜ್‌ ಇಲ್ಲ – ಮೂರು ಪ್ರಸ್ತಾಪಕ್ಕೆ ಒಪ್ಪಿಗೆ

ಬೆಂಗಳೂರು: ಕನಕಪುರ (Kanakpura) ಹಾಗೂ ರಾಮನಗರದಲ್ಲಿ (Ramangara) ಮೆಡಿಕಲ್ ಕಾಲೇಜು (Medical College) ಸ್ಥಾಪಿಸಲು ಮುಂದಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಯತ್ನಕ್ಕೆ ಹಿನ್ನಡೆಯಾಗಿದೆ. ಎರಡು ಕಾಲೇಜುಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ತಿರಸ್ಕರಿಸಿದೆ.

ಪ್ರಸ್ತಾವಿತ ಐದು ಕಾಲೇಜುಗಳ ಪೈಕಿ ಮೂರಕ್ಕೆ ಮಾತ್ರ ಎನ್‌ಎಂಸಿ ಒಪ್ಪಿಗೆ ಕೊಟ್ಟಿದೆ. ಎನ್‌ಎಂಸಿ ನಿರ್ಧಾರವನ್ನು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಸಮರ್ಥಿಸಿಕೊಂಡಿದ್ದಾರೆ. ಬಿಲ್ಡಿಂಗ್ ಇಲ್ಲದೇ ಕಾಲೇಜು ಹೇಗೆ ಆಗಲಿದೆ ಅಂತ ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ತಾವು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.

 

ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ -ಆಪರೇಷನ್ ಬಿಪಿಎಲ್ ಕಾರ್ಡ್‌ಗೆ ಪ್ಲಾನ್!

ಬೆಂಗಳೂರು ಉತ್ತರದ ವ್ಯಾಪ್ತಿಯ ಬಿಜಿಎಸ್​​ ವೈದ್ಯಕೀಯ ಕಾಲೇಜು, ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ಆಂಡ್‌ ರಿಸರ್ಚ್‌ ಸೆಂಟರ್ ಹಾಗೂ ಬಾಗಲಕೋಟೆಯ ಎಸ್‌ಆರ್ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಎನ್‌ಎಂಸಿ ಒಪ್ಪಿಗೆ ನೀಡಿದೆ.

ವಿಧಾನಸೌಧದಲ್ಲಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತರಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿತ್ತು. ಈ ಪ್ರಸ್ತಾಪವನ್ನು ಬಜೆಟ್‌ನಲ್ಲೂ ಸೇರಿಸಲಾಗಿತ್ತು. ಆದರೆ ಸಿಬ್ಬಂದಿ ಕೊರತೆ ಎಂದು ಅನುಮತಿ ನೀಡಿಲ್ಲ ಎಂಬ ವಿಚಾರ ತಿಳಿಸಿದ್ದು, ಈ ಬಗ್ಗೆ ಗಮನಹರಿಸುತ್ತೇವೆ ಎಂದು ಹೇಳಿದರು.