ಬಿಕೋ ಎನ್ನುತ್ತಿದೆ ಭಕ್ತರಿಂದ ತುಂಬಿ ತುಳುಕುತ್ತಿದ್ದ ಸಾಲೂರು ಮಠ

– ಸಂಸ್ಕೃತ ಪಾಠ ಶಾಲೆಗೂ ಬೀಗ

ಚಾಮರಾಜನಗರ/ಮೈಸೂರು: ಪ್ರತಿ ದಿನವೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ಹಾಗೂ ದಾಸೋಹಕ್ಕೆ ಪ್ರಸಿದ್ಧವಾಗಿರುವ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠ ಇದೀಗ ಬಿಕೋ ಎನ್ನುತ್ತಿದೆ.

ಸುಳ್ವಾಡಿ ಮಾರಮ್ಮ ದುರಂತದ ಪ್ರಕರಣದಲ್ಲಿ ಬಂಧಿಯಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮೀಜಿಯಿಂದ ಮಠಕ್ಕೆ ಕಳಂಕ ಬಂದಿದೆ. ಇದ್ರಿಂದಾಗಿ ಇತ್ತ ಭಕ್ತರೇ ಸುಳಿಯುತ್ತಿಲ್ಲ. ಈ ಮೊದಲು ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಠ ಇದೀಗ ಸಂಪೂರ್ಣವಾಗಿ ಸ್ತಬ್ಧವಾಗಿದೆ.

ಇದಲ್ಲದೇ ಮಠದ ಮುಂಭಾಗವಿರುವ ಸಂಸ್ಕೃತ ಪಾಠ ಶಾಲೆಯೂ ಮುಚ್ಚಿದೆ. ಈ ಶಾಲೆಯಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಸಂಸ್ಕೃತ ಪಾಠವನ್ನು ಕಲಿಯುತ್ತಿದ್ದರು. ಇದೀಗ ಆ ಶಾಲೆಗಳಿಗೂ ಸಹ ಬೀಗ ಹಾಕಲಾಗಿದೆ.

ಫೋಟೋ ಹರಿದು ಆಕ್ರೋಶ:
ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಈಗ ಸಾಲೂರು ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 1ನೇ ಆರೋಪಿ ಇಮ್ಮಡಿ ಮಹದೇಸ್ವಾಮಿ ವಿರುದ್ಧ ಸಿಡಿದೆದ್ದಿರುವ ಭಕ್ತರು, ಸಾಲೂರು ಮಠದಲ್ಲಿದ್ದ ಕಿರಿಯ ಸ್ವಾಮೀಜಿ ಫೋಟೋ ಹರಿದು ಭಕ್ತರ ಆಕ್ರೋಶ ಹೊರಹಾಕಿದ್ದಾರೆ. ವಿಷ ರಾಕ್ಷಸ ಇಮ್ಮಡಿ ಮಹಾದೇವಸ್ವಾಮಿ ಫೋಟೋ ಒಡೆದು ಚೂರುಚೂರು ಮಾಡಿದ್ದಾರೆ.

ಇಮ್ಮಡಿ ಸ್ವಾಮಿ ಕುಳಿತುಕೊಳ್ಳುತ್ತಿದ್ದ ಪೀಠದ ಹಿಂದಿನ ಭಾವಚಿತ್ರವನ್ನು ಮಠದಿಂದ ಹೊರಗಿಡಲಾಗಿತ್ತು. ಅದನ್ನು ಕಂಡ ಕೂಡದೇ ಸಿಟ್ಟಿಗೆದ್ದ ಭಕ್ತರು, ತಮ್ಮಲ್ಲಿನ ಆಕ್ರೋಶ ಹೊರಹಾಕಿದ್ದಾರೆ. ಹಿರಿಸ್ವಾಮಿ ಮತ್ತು ಕಿರಿಸ್ವಾಮಿ ಒಟ್ಟಿಗೆ ಇದ್ದ ಫೋಟೋಗಳಲ್ಲಿ ಕಿರಿಸ್ವಾಮಿ ಫೋಟೋವನ್ನು ಹರಿದುಹಾಕಿದ್ದಾರೆ. ಇಮ್ಮಡಿ ಮಹದೇಸ್ವಾಮಿಯಿಂದ ಮಠಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ಅಸ್ವಸ್ಥರಿಗೆ ಮುಂದುವರಿದ ಚಿಕಿತ್ಸೆ:
ದೇವಸ್ಥಾನದ ಕ್ರಿಮಿನಾಶಕ ಪ್ರಸಾದ ಸೇವೆನೆಯಿಂದ ಅಸ್ವಸ್ಥರಾದವರಿಗೆ 11ನೇ ದಿನವೂ ಚಿಕಿತ್ಸೆ ಮುಂದುವರಿದಿದೆ. ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 33 ಮಂದಿಗೆ ಚಿಕಿತ್ಸೆ ನೀಡಲಾಗ್ತಿದೆ. ಅದರಲ್ಲಿ 8 ಮಂದಿಗೆ ಐಸಿಯೂನಲ್ಲಿ ಟ್ರೀಟ್‍ಮೆಂಟ್ ನೀಡಲಾಗ್ತಿದೆ. 12 ಮಂದಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು 13 ಮಂದಿಗೆ ಸಾಮಾನ್ಯ ವಾರ್ಡ್‍ನಲ್ಲಿ ನೀಡಲಾಗ್ತಿದೆ. ಇನ್ನು ಕೆ.ಆರ್.ಆಸ್ಪತ್ರೆಯಿಂದ ಎಲ್ಲಾ ಅಸ್ವಸ್ಥರು ಡಿಸ್ಚಾರ್ಜ್ ಆಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *