ಹಾಸ್ಟೆಲ್ ಗೇಟ್ ಬಳಿ ಎನ್‍ಐಟಿ ವಿದ್ಯಾರ್ಥಿಯ ಮೃತದೇಹ ಪತ್ತೆ

ಭುವನೇಶ್ವರ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್‍ಐಟಿ) ವಿದ್ಯಾರ್ಥಿಯೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಇಂದು ಬೆಳಗ್ಗೆ ಹಾಸ್ಟೆಲ್ ಗೇಟ್‍ನ ಬಳಿ ಪತ್ತೆಯಾಗಿರುವ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದೆ.

ವಿದ್ಯಾರ್ಥಿಯನ್ನು ಸಯ್ಯದ್ ಮುನಿಬ್ ಅಹಮದ್ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ಖೋರ್ದಾ ಜಿಲ್ಲೆಯ ನಿವಾಸಿಯಾಗಿದ್ದು, ಇಂಟಗ್ರೇಟೆಡ್ ಎಂಎಸ್‍ಸಿ (ಮ್ಯಾಥಮ್ಯಾಟಿಕ್ಸ್) ವ್ಯಾಸಂಗ ಮಾಡುತ್ತಿದ್ದನು. ಮೃತ ಅಹಮದ್ ಕಾಲೇಜಿನ ಎಂಎಸ್ ಸ್ವಾಮಿನಾಥನ್ ಹಾಸ್ಟೆಲ್‍ನಲ್ಲಿ ನೆಲೆಸಿದ್ದನು ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ ಅಹಮದ್ ಹಾಸ್ಟೆಲ್ ಗೇಟ್ ಮುಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ತಕ್ಷಣ ಆತನನ್ನು ಸಮೀಪದ ಸಮುದಾಯ ಕಲ್ಯಾಣ ಸೊಸೈಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅಹಮದ್ ಮೃತಪಟ್ಟಿದ್ದನು ಅಂತ ವೈದ್ಯರು ತಿಳಿಸಿದರು ಎಂದು ಕಾಲೇಜು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯಕ್ಕೆ ಅಹಮದ್ ಸಾವಿನ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದೇವೆ. ಈಗಾಗಲೇ ಮೃತ ಅಹಮದ್ ಕುಟುಂಬದ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *