ನಿರ್ಭಯಾ ಪ್ರಕರಣದ ದೋಷಿ ವಿನಯ್ ಕ್ಷಮಾದಾನ ಅರ್ಜಿ ತಿರಸ್ಕೃತ 

ನವದೆಹಲಿ: ನಿರ್ಭಯಾ ಪ್ರಕರಣದ ದೋಷಿ ವಿನಯ್ ಶರ್ಮಾ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತ ವಾಗಿದೆ. ಪ್ರಕರಣದ ಮತ್ತೋರ್ವ ದೋಷಿ ಮುಖೇಶ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿ ಸಹ ತಿರಸ್ಕೃತಗೊಂಡಿತ್ತು.

ಪ್ರಕರಣದ ನಾಲ್ವರು ಅಪರಾಧಿಗಳು ಇಂದು ಬೆಳಗ್ಗೆ 6 ಗಂಟೆಗೆ ಗಲ್ಲುಶಿಕ್ಷೆಗೆ ಒಳಗಾಗಬೇಕಿತ್ತು. ಆದರೆ ಪಟಿಯಾಲ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಗಲ್ಲುಶಿಕ್ಷೆ ಮುಂದೂಡಿಕೆಯಾಗಿದೆ. ಶುಕ್ರವಾರ ಈ ಆದೇಶಕ್ಕೆ ತಡೆ ನೀಡಲಾಗಿದೆ. ನ್ಯಾಯಾಲಯ ಹೊಸ ದಿನಾಂಕವನ್ನು ನಿಗದಿ ಮಾಡಿಲ್ಲ.

ಫೆ. 1ರಂದು ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೆ ಏರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ ರಾಷ್ಟ್ರಪತಿಗಳ ತೀರ್ಮಾನ ಪ್ರಕಟವಾಗದ ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್ ತಡೆಯಾಜ್ಞೆ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು.

ಇನ್ನೊಂದೆಡೆ ಮತ್ತೋರ್ವ ದೋಷಿ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹಾಗಾಗಿ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರಿಂ ಕೋರ್ಟ್‍ಗೆ ಮತ್ತೊಮ್ಮೆ ಮನವಿ ಮಾಡಿದ್ದಾನೆ. ಈ ಹಿಂದೆಯೇ ತ್ರಿಸದಸ್ಯ ಪೀಠ ಪವನ್ ಅರ್ಜಿಯನ್ನು ತಿರಸ್ಕೃತ ಮಾಡಿತ್ತು. ಈಗ ಸುಪ್ರೀಂಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದಾನೆ.

ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಬುಧವಾರ ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿತ್ತು. ಮುಖೇಶ್ ನಂತೆಯೇ ಉಳಿದ ಅಪರಾಧಿಗಳು ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಏರುವುದಕ್ಕೆ ವಿಳಂಬ ಮಾಡುವ ತಂತ್ರ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *