10 ರೂ. ಕೊಟ್ಟು ತಿಂಡಿ ತಾ ಎಂದು ಹೇಳಿ ಅತ್ಯಾಚಾರವೆಸಗಿದ!

ಶಿಮ್ಲಾ: ತಿಂಡಿ ತಗೊಂಡು ಬಾ ಎಂದು 9 ವರ್ಷದ ಬಾಲಕಿ ಕೈಯಲ್ಲಿ 10 ರೂ ಕೊಟ್ಟು, ಆಕೆ ಅಂಗಡಿಗೆ ಹೋಗುತ್ತಿದ್ದಂತೆಯೇ ಆಕೆಯನ್ನು ದೂಡಿ ಅತ್ಯಾಚಾರವೆಸಗಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಕುಲು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೇಂದ್ರದ ಬಳಿಯೇ ಭಾನುವಾರ ನಡೆದಿದೆ. ಘಟನೆ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯನ್ನು ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಭರೇಶ್ ಗ್ರಾಮದವನು ಎನ್ನಲಾಗಿದೆ. ಜಿಲ್ಲೆಯ ಅನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮತದಾನ ಕೇಂದ್ರದ ಬಳಿಯ ಶಾಲಾ ಮೈದಾನದಲ್ಲಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಕೆಯನ್ನು ಕರೆದ ಆರೋಪಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

ಆರೋಪಿ ಬಾಲಕಿಗೆ 10 ರೂ. ಕೊಟ್ಟು ತಿಂಡಿ ತರುವಂತೆ ಕಳುಹಿಸಿದ್ದಾನೆ. ಹೀಗಾಗಿ ಬಾಲಕಿ ಹಣ ಹಿಡಿದುಕೊಂಡು ಅಂಗಡಿಯತ್ತ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದೊಳಗೆ ಎಳೆದುಕೊಂಡು ಆಕೆಯನ್ನು ರೇಪ್ ಮಾಡುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

ಸಂತ್ರಸ್ತೆಯ ತಾಯಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಾಲಕಿ ಆರೋಪಿಯ ಮನೆಗೆ ಆಟವಾಡಲು ತೆರಳಿರಬಹುದೆಂದು ನಂಬಿದ್ದರು. ಆದರೆ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತಾಯಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಸ್‍ಪಿ ತೇಜಿಂದ್ರ ವರ್ಮಾ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *