ಸತತ 7 ಗಂಟೆಯ ನಂತ್ರ ಬೆನ್ನಿನ ಮೇಲೆ ಮೂಡಿದ ಅಭಿಮನ್ಯು

ರಾಮನಗರ: ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಮೇಲಿನ ಅಭಿಮಾನಕ್ಕೆ ಅಭಿಮಾನಿಯೊಬ್ಬ ತನ್ನ ಬೆನ್ನಿನ ಮೇಲೆ ನಿಖಿಲ್ ಭಾವಚಿತ್ರವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ರಾಮನಗರ ತಾಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದ ಚನ್ನೇಗೌಡ ತನ್ನ ಬೆನ್ನಿನ ಮೇಲೆ ನಿಖಿಲ್ ಕುಮಾರಸ್ವಾಮಿಯ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ತೋರ್ಪಡಿಸಿದ್ದಾರೆ. ಮುನಿರತ್ನ ‘ಕುರುಕ್ಷೇತ್ರ’ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಿರುವ ಅಭಿಮನ್ಯು ಪಾತ್ರದ ಗೆಟಪನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ರಾಮನಗರದ ಮಧು ಟ್ಯಾಟೂ ಸೆಂಟರ್‌ನಲ್ಲಿ ಸುಮಾರು 7 ಗಂಟೆಗಳ ಕಾಲ ಟ್ಯಾಟೂ ಬಿಡಿಸಿದ್ದಾರೆ. ಅಲ್ಲದೆ ನಿಖಿಲ್ ಭಾವಚಿತ್ರದ ಅಡಿಯಲ್ಲಿ ಯುವರಾಜ ನಿಖಿಲ್‍ಗೌಡ ಎಂದು ಬರೆಸಿಕೊಂಡಿದ್ದಾರೆ. ನಿಖಿಲ್ ಟ್ಯಾಟೂ ನೋಡಲು ಯುವಕರ ದಂಡು ಸಹ ಟ್ಯಾಟೂ ಸೆಂಟರ್‌ಗೆ ಮುಗಿಬಿದ್ದಿತ್ತು.

ಇತ್ತೀಚೆಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿನಲ್ಲಿ ಸಾರಥಿಯಾಗಿದ್ದ ನಟ ದರ್ಶನ್ ಮೇಲಿನ ಅಭಿಮಾನಕ್ಕೆ ಅಭಿಮಾನಿಯೊಬ್ಬ ಸಂಗೊಳ್ಳಿ ರಾಯಣ್ಣ ಗೆಟಪ್‍ನ ಟ್ಯಾಟೂವನ್ನು ಹಾಕಿಸಿಕೊಂಡಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿಯ ಭಾವಚಿತ್ರವನ್ನು ನಿಖಿಲ್ ಅಭಿಮಾನಿ ತನ್ನ ಬೆನ್ನ ಮೇಲೆ ಮೂಡಿಸಿಕೊಂಡಿದ್ದಾರೆ. ಈ ಮೂಲಕ ರಾಮನಗರದಲ್ಲಿ ಇದೀಗ ನಟ ದರ್ಶನ್ ಹಾಗೂ ನಟ ನಿಖಿಲ್ ಅಭಿಮಾನಿಗಳ ನಡುವೆ ಟ್ಯಾಟೂ ಕೌಂಟರ್‌ಗಳು ಶುರುವಾಗಿದೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *