ಯಶ್ ವಿರುದ್ಧದ ಬಾಡಿಗೆ ವಿಚಾರವನ್ನು ಸಮರ್ಥಿಸಿಕೊಂಡ ನಿಖಿಲ್

ಮಂಡ್ಯ: ಮಾಲೀಕರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ನಟ ಯಶ್‍ಗೆ ಹೇಳಿದ್ದ ಹೇಳಿಕೆಯನ್ನು ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್, ನಾನು ಸಮಾಧಾನವಾಗೇ ಇದ್ದೇನೆ. ಸಮಾಧಾನವಾಗಿಯೇ ಇರುತ್ತೇನೆ. ನನ್ನ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದರು. ನಾನು ಯೋಗ್ಯನೋ ಅಲ್ಲವೋ ಎಂಬುದನ್ನು ನನ್ನ ತಂದೆ-ತಾಯಂದಿರು ಮತ್ತು ಮಂಡ್ಯದ ಜನತೆ ತೀರ್ಮಾನಿಸುತ್ತಾರೆ. ನಾನು ಸ್ಪಷ್ಟನೆ ನೀಡಬೇಕಿತ್ತು. ಬೇರೆ ಯಾರನ್ನೋ ಕೀಳಾಗಿ ಕಾಣಬೇಕು ಎಂದು ಮಾತನಾಡಲಿಲ್ಲ. ನಾನು ನನ್ನ ಕಾರ್ಯಕರ್ತ ಬಂಧುಗಳಿಗೆ ಸ್ಪಷ್ಟನೆ ಕೊಟ್ಟೆ ಅಷ್ಟೇ ಎಂದು ಹೇಳಿದರು.

ನಮ್ಮ ಕುಟುಂಬದವರು ರೈತರಿಗೆ ಏನು ಮಾಡಿದ್ದಾರೆ ಎನ್ನುವವರು ರೈತರಿಗೆ ಏನು ಮಾಡಿದ್ದಾರೆ. ದೇವೇಗೌಡರು ರೈತರಿಗೆ ಏನು ಮಾಡಿದ್ದಾರೆ ಎಂಬುವುದನ್ನು ರೈತ ಸಮುದಾಯದ ತಂದೆ-ತಾಯಂದಿರು ಅರ್ಥೈಸಿಕೊಂಡಿದ್ದಾರೆ. ಇಂದಿಗೂ ಕೂಡ ರೈತರು ಆತ್ಮಹತ್ಯೆ ಮಾಡಿಕೊಂಡರೆ ಕುಮಾರಣ್ಣ ಬರುತ್ತಾರೆ. ಅದುಬಿಟ್ಟು ಇಷ್ಟು ವರ್ಷ ಅಧಿಕಾರದಲ್ಲಿರುವವರು ಯಾರೂ ಬಂದಿದ್ದಾರೆ ಎಂದು ನಿಖಿಲ್ ಪ್ರಶ್ನೆ ಮಾಡಿದ್ದಾರೆ.

ಪಾಪ ಅವರು ಇನ್ನೇನು ಹೇಳುತ್ತಾರೆ. ಇದು ನಮ್ಮ ಪಕ್ಷದ ತೀರ್ಮಾನವಾಗಿದೆ. ಈ ತೀರ್ಮಾನಕ್ಕೆ ನಾನು ಅವರಿಗೇಕೆ ಉತ್ತರ ಕೊಡಲಿ. ಪಕ್ಷ ನನ್ನ ಕುಟುಂಬ ಇದ್ದಂತೆ. ಅವರ ಮಾತಿಗೆ ನಾನು ಬೆಲೆ ಕೊಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನನ್ನನ್ನು ಯಾಕೆ ಚುನಾವಣೆಗೆ ನಿಲ್ಲಿಸಿದ್ದಾರೆ ಎನ್ನುವವರಿಗೆ ಭಯ ಆಗುತ್ತಿದೆಯಾ? ಅವರನ್ನು ಕೇಳಿ ನನ್ನನ್ನು ಚುನಾವಣೆಗೆ ನಿಲ್ಲಿಸಬೇಕಿತ್ತಾ? ಯಾಕೆ ಅವರಿಗೆ ಭಯ ಆಗ್ತಿದೆಯ? ನಿಖಿಲ್ ಎಂದು ನಿಖಿಲ್ ಹಾಸನದವರು ಎಂಬ ಸುಮಲತಾ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಒಂದು ಚುನಾವಣೆಗೆ ಕುಮಾರಣ್ಣ ಪ್ರಚಾರಕ್ಕೆ ಬರದಿದ್ದರೂ ಮಂಡ್ಯ ಜಿಲ್ಲೆಯ ಜನತೆ ನನ್ನ ಕೈ ಹಿಡಿತಾರೆ. ಅವರು ಮುಖ್ಯಮಂತ್ರಿ ಆಗಿ ಎಲ್ಲ ಕಡೆ ಹೋಗಬೇಕು. ಒಂದೆರಡು ದಿನ ಬಂದರೂ ಸಾಕು. ನನಗೆ ನಮ್ಮ ಜನತೆ ಮತ್ತು ನಮ್ಮ ಕಾರ್ಯಕರ್ತರ ಮೇಲೆ ನಂಬಿಕೆ ಇದೆ. ಎಲ್ಲರೂ ನನಗೆ ಬೆಂಬಲ ಕೊಡುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *