ನಿಖಿಲ್ ಎಲ್ಲಿದ್ದೀಯಪ್ಪ ಫಿಲಂಗೆ ನಾನೇ ಹೀರೋ, ಪುಟ್ಟರಾಜಣ್ಣನೇ ಪ್ರೊಡ್ಯೂಸರ್: ನಿಖಿಲ್

– ಸುಮ್ಮನೆ ಟೀ, ಕಾಫಿ ಕುಡಿಯಲು ಮಂಡ್ಯಕ್ಕೆ ಬರಲ್ಲ
_ ಅಭಿಷೇಕ್‍ಗೆ ನಿಖಿಲ್ ಟಾಂಗ್

ಮಂಡ್ಯ: ನಿಖಿಲ್ ಎಲ್ಲಿದ್ದೀಯಪ್ಪ ಫಿಲಂಗೆ ನಾನೇ ಹೀರೋ, ಪುಟ್ಟರಾಜಣ್ಣನೇ ಪ್ರೊಡ್ಯೂಸರ್ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ ಎಲ್ಲಿದ್ದೀಯಪ್ಪ ಡೈಲಾಗ್ ರಾಜ್ಯ ಅಷ್ಟೇ ಅಲ್ಲ ಅಮೆರಿಕದಲ್ಲಿಯೂ ಫುಲ್ ಫೇಮಸ್ ಆಗಿದೆಯಂತೆ. ಈ ಟೈಟಲ್‍ಗೆ ಭಾರೀ ಬೇಡಿಕೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಈ ಟೈಟಲ್ ಅನ್ನು ಯಾರಿಗೂ ಕೊಡದಂತೆ ಚಿತ್ರ ಮಂಡಳಿಗೆ ಮನವಿ ಮಾಡಿಕೊಂಡಿದ್ದೇನೆ. ಸಚಿವ ಸಿ.ಎಸ್.ಪುಟ್ಟರಾಜು ಅವರೇ ಪ್ರೊಡ್ಯೂಸರ್ ಎಂದು ತಮಾಷೆ ಮಾಡುತ್ತಲೇ ವಿರೋಧಿಗಳಿಗೆ ಟಾಂಗ್ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗುತ್ತೇನೆ ಎನ್ನುವ ನಿರೀಕ್ಷೆ ನನಗೆ ಇರಲಿಲ್ಲ. ಈ ಬಗ್ಗೆ ಎಲ್ಲಿಯೂ ಕೇಳಿರಲಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು ಒತ್ತಡ ಹಾಕಿ ನನ್ನ ಮೇಲೆ ನಂಬಿಕೆ ಇಟ್ಟು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು. ಈ ನಂಬಿಕೆಗೆ ನಾನು ದ್ರೋಹ ಮಾಡಲ್ಲ ಎಂದು ತಿಳಿಸಿದರು.

ಯಾರೇ 20 ವರ್ಷಗಳ ಕಾಲ ರಾಜಕೀಯ ಮಾಡಿದ್ದರೂ ಈ ರೀತಿಯ ಚುನಾವಣೆ ಎದುರಿಸಲು ಆಗುವುದಿಲ್ಲ. ಆದರೆ ನಾನು ಮೊದಲ ಚುನಾವಣೆಯಲ್ಲೇ ಆ ರೀತಿಯ ಚುನಾವಣೆ ಎದುರಿಸಿದ್ದೇನೆ. ಈ ಗೆಲುವು ನನ್ನದಲ್ಲ. 45 ದಿನಗಳ ಕಾಲ ದುಡಿದ ಕಾರ್ಯಕರ್ತರ ಶ್ರಮದ ಗೆಲುವು ಎಂದರು.

ನಾನು ಶಾಸಕರ ಮೇಲೆ ಹಲ್ಲೆ ಮಾಡಿ, ಜಗಳ ಮಾಡಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಶಾಸಕರಿಗೆ ನಾನು ಗೌರವ ನೀಡಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ನಾನು ಬದಲಾಗಲ್ಲ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮಂಡ್ಯಕ್ಕೆ ಸುಮ್ಮನೆ ಟೀ, ಕಾಫಿ ಕುಡಿಯಲು ಬರುವುದಿಲ್ಲ. ಮಾಧ್ಯಮದವರು ವಿಶ್ರಾಂತಿ ಮುಗಿಯಿತಾ ಅಂತ ಕೇಳುತ್ತಾರೆ. ಆದರೆ ನಾನು ಕಳೆದ ಹದಿನೈದು ದಿನದಿಂದಲೂ ಮಂಡ್ಯದಲ್ಲಿ ಸ್ಮಾರ್ಟ್ ಸ್ಕೂಲ್, ಉದ್ಯೋಗ ಸೃಷ್ಟಿಗೆ ಬೇಕಾದ ಕೆಲಸ ಮಾಡುತ್ತಿದ್ದೇನೆ ಎಂದು ಮಂಡ್ಯಕ್ಕೆ ಬಂದು ಟೀ ಕುಡಿದು ಹೋದ ಅಭಿಷೇಕ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *