ದೇವೇಗೌಡರು ನೀಡಿರುವ ಜವಾಬ್ದಾರಿಯನ್ನು ಉಸಿರು ಇರೋವರೆಗೂ ನಿರ್ವಹಿಸ್ತೀನಿ: ನಿಖಿಲ್ ಕುಮಾರ್

ಮಂಗಳೂರು: ನಮ್ಮ ಪಕ್ಷದ ವರಿಷ್ಠರಾಗಿರುವ ಹೆಚ್.ಡಿ.ದೇವೇಗೌಡರು ನೀಡಿರುವ ಜವಾಬ್ದಾರಿಯನ್ನು ನನ್ನ ಉಸಿರು ಇರೋವರೆಗೂ ನಿರ್ವಹಿಸುತ್ತೇನೆ ಎಂದು ಸಿಎಂ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಶಿವರಾತ್ರಿ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ ಸ್ವಾಮಿ ಮಂಜುನಾಥನ ದರ್ಶನ ಪಡೆದ ನಿಖಿಲ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. ದೇವೇಗೌಡರು ನಮ್ಮಂತಹ ಯುವಕರಿಗೆ ಸ್ಫೂರ್ತಿಯಾಗಿದ್ದು, ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಅವರು ಕೊಟ್ಟಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ನನ್ನಲಿದೆ. ಇಂದು ಅಧಿಕೃತವಾಗಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ. ವರಿಷ್ಠರು ತೀರ್ಮಾನಿಸಿದಂತೆ ಚುನಾವಣೆಗೆ ನಿಲ್ಲಬೇಕು. ಮಂಡ್ಯ ಜನರ ಋಣ ತೀರಿಸುವ ಅವಕಾಶವನ್ನು ದೇವೇಗೌಡರು ನೀಡಿದ್ದಾರೆ. ಸುಮಲತಾ ಅಂಬರೀಷ್ ಅವರ ಸ್ಪರ್ಧೆಯ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಎಲ್ಲರಿಗೂ ಚುನಾವಣೆಗೆ ನಿಲ್ಲಲು, ಪಕ್ಷೇತರರಾಗಿ ಸ್ಪರ್ಧಿಸುವ ಹಕ್ಕು ಇದೆ. ಇದಕ್ಕಿಂತ ಹೆಚ್ಚಿಗೆ ನಾನು ಏನು ಹೇಳಲಾರೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *