ವಿಪಕ್ಷಗಳ ಸಭೆಗೆ ಆಪ್ ಗೈರು – ಇಲ್ಲಿದೆ ಕೇಜ್ರಿವಾಲ್ ಎಲೆಕ್ಷನ್ ಸ್ಟ್ರಾಟಜಿ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಆಮ್ ಆದ್ಮಿ ವಿಪಕ್ಷಗಳಿಂದ ಅಂತರ ಕಾಯ್ದುಕೊಂಡಿದ್ದು ಪ್ರತ್ಯೇಕ ಬಣ ಸೃಷ್ಟಿಸಿಕೊಂಡಿದೆ. ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆಯಿಂದ ದೂರ ಉಳಿದುಕೊಳ್ಳುವ ಮೂಲಕ ಹೊಸ ಚುನಾವಣಾ ತಂತ್ರಗಳನ್ನು ಹೆಣೆಯಲು ಆಪ್ ಮುಂದಾಗಿದೆ.

ಸಂಸತ್ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಸತ್‍ನ ಅನೆಕ್ಸ್ ನಲ್ಲಿ ಸೋನಿಯಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಭೆ ಕರೆಯಲಾಗಿತ್ತು. ದೇಶದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಪೌರತ್ವ ಕಾಯ್ದೆ(ಸಿಎಎ) ವಿರುದ್ಧ ವಿಪಕ್ಷಗಳ ಹೋರಾಟ ಸೇರಿದಂತೆ ಸಂಸತ್ ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಸಂಬಂಧ ಚರ್ಚೆ ಮಾಡಲಾಯಿತು. ಸಭೆಗೆ ಬಹುತೇಕ ವಿಪಕ್ಷ ನಾಯಕರು ಭಾಗಿಯಾಗಿದ್ದರು ಆದರೆ ಆಮ್ ಆದ್ಮಿ, ಬಿಎಸ್ಪಿ, ಟಿಎಂಸಿ ಗೈರಾಗುವ ಮೂಲಕ ಪ್ರತ್ಯೇಕ ಬಣ ಸೃಷ್ಟಿಸಿಕೊಂಡಿದ್ದಾರೆ.

ಆಪ್ ವಿಪಕ್ಷಗಳ ಸಭೆ ಗೈರಾಗುವ ಹಿಂದೆ ದೆಹಲಿ ಚುನಾವಣೆಯ ಲೆಕ್ಕಾಚಾರವಿದೆ ಎನ್ನಲಾಗಿದ್ದು, ಬಿಜೆಪಿಯಂತೆ ಆಪ್ ಕೂಡ ದೆಹಲಿ ಹೊರ ಭಾಗದಲ್ಲಿರುವ ನಿರಾಶ್ರಿತರ ಮತಗಳ ಮೇಲೆ ಕಣ್ಣಿಟ್ಟಿದೆ. ಈ ಮತಗಳನ್ನು ಸೆಳೆಯುವ ಕಾರಣದಿಂದಲೇ ಹಿಂದಿನಿಂದಲೂ ಸಿಎಎ ವಿರುದ್ಧದ ಹೋರಾಟಗಳಿಂದ ಆಪ್ ಅಂತರ ಕಾಯ್ದುಕೊಳ್ಳುತ್ತಾ ಬಂದಿದೆ. ಈಗ ಸಿಎಎ ವಿರುದ್ಧ ನಡೆದ ವಿಪಕ್ಷಗಳ ಸಭೆಯಲ್ಲಿ ಭಾಗಿಯಾಗದೇ ಮತ್ತೊಂದು ಎಚ್ಚರಿಕೆಯ ಹೆಜ್ಜೆಯಿಟ್ಟಿದೆ. ಇದನ್ನೂ ಓದಿ:ಸಿಎಎ, ಎನ್​​ಆರ್​​ಸಿ ಹೋರಾಟ – ಕಾಂಗ್ರೆಸ್, ಎಡಪಕ್ಷಗಳಿಂದ ಡರ್ಟಿ ಪಾಲಿಟಿಕ್ಸ್ : ಮಮತಾ

ಸಿಎಎ ವಿರೋಧಿಸಿ ಹೇಳಿಕೆ ನೀಡುವುದಾಗಲಿ ಮತ್ತು ಸಭೆಗಳಲ್ಲಿ ಭಾಗಿಯಾಗುವುದು ಮಾಡಿದ್ದಲ್ಲಿ ದೆಹಲಿಯ ಹೊರ ಭಾಗದಲ್ಲಿ ವಾಸವಾಗಿರುವ ನಿರಾಶ್ರಿತರ ಮತಗಳ ಮೇಲೆ ಪರಿಣಾಮ ಬೀರಬಹುದು ಎಂದು ಆಪ್ ಅಂದಾಜಿಸಿದ್ದು ಹೀಗಾಗಿ ಅದರಿಂದ ದೂರ ಉಳಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸಿಎಎಯನ್ನು ಕಠಿಣವಾಗಿ ವಿರೋಧಿಸದೇ ತಟಸ್ಥ ನೀತಿ ಅನುಸರಿಸುವ ಮೂಲಕ ದೆಹಲಿಯಲ್ಲಿ ವಾಸವಾಗಿರುವ ಬಾಂಗ್ಲಾ, ಪಾಕ್ ನಿರಾಶ್ರಿತರ ಮತಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದೆ.

ಪೌರತ್ವ ಕಾಯ್ದೆಯನ್ನು ಬಿಜೆಪಿ ಜಾರಿ ತಂದರೂ ದೆಹಲಿಯ ಸ್ಲಂಗಳಲ್ಲಿ ಆಪ್ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಹೀಗಾಗಿ ಈ ಮತಗಳು ಎಎಪಿ ಸೆಳೆದುಕೊಳ್ಳಬಹುದು ಎಂದು ನಿರೀಕ್ಷಿಸಿದೆ. ಒಂದು ವೇಳೆ ಸಿಎಎಯನ್ನು ಬಲಿಷ್ಠವಾಗಿ ವಿರೋಧಿಸಿದ್ದಲ್ಲಿ ಈ ಮತಗಳು ಕಳೆದುಕೊಳ್ಳಬಹುದು ಜೊತೆಗೆ ಬಿಜೆಪಿಗೆ ಲಾಭವಾಗಬಹುದು ಎನ್ನುವ ಭೀತಿಯಲ್ಲಿ ಎಎಪಿ ಇದೆ. ಹೀಗಾಗೀ ಇಂದು ನಡೆದ ವಿಪಕ್ಷಗಳ ಸಭೆಯಿಂದ ಆಪ್ ದೂರ ಉಳಿದುಕೊಳ್ಳುವ ಮೂಲಕ ನಿರಾಶ್ರಿತರ ಮತಗಳ ಕ್ರೂಢೀಕರಣಕ್ಕೆ ಮುಂದಾಗಿದೆ.

ಇದಲ್ಲದೆ ದೆಹಲಿಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧಿಸಲು ಚಿಂತಿಸಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಜೊತೆ ಗುರುತಿಸಿಕೊಳ್ಳುವುದು ಸರಿಯಲ್ಲ ಕಾಂಗ್ರೆಸ್ ಸೇರಿ ಇತರೆ ಪಕ್ಷಗಳ ಜೊತೆ ಗುರುತಿಸಿಕೊಂಡು ಅವರ ವಿರುದ್ಧವೇ ಚುನಾವಣೆ ಸ್ಪರ್ಧಿಸಿದ್ದಲ್ಲಿ ಇದು ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಗಳಿದೆ. ಈ ಕಾರಣಗಳಿಂದ ಆಪ್ ಹೆಚ್ಚೆಚ್ಚು ವಿಪಕ್ಷಗಳು ಮತ್ತು ಸಿಎಎ ವಿರುದ್ಧ ಸಭೆಗಳಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

Comments

Leave a Reply

Your email address will not be published. Required fields are marked *