KSRP ಪೊಲೀಸರಿಗೆ ಹೊಸ ಟಾಸ್ಕ್

ಬೆಂಗಳೂರು: ಆಗಸ್ಟ್ ನಲ್ಲಿ ನಡೆದ ಕೊಡಗು ಪ್ರವಾಹದಿಂದ ಎಚ್ಚೆತ್ತ ರಾಜ್ಯ ಪೊಲೀಸ್ ಇಲಾಖೆ KSRP ಸಿಬ್ಬಂದಿಗೆ ಹೊಸ ಟಾಸ್ಕ್ ನೀಡಲು ಸಿದ್ಧತೆ ನಡೆಸಿದೆ.

ಕೊಡಗು ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಪೊಲೀಸರು ಇಂತಹ ತುರ್ತು ಸಂದರ್ಭದಲ್ಲಿ ರಾಷ್ಟೀಯ ರಕ್ಷಣೆ ಪಡೆಗಳಿಗೆ ಕಾಯದೇ ರಾಜ್ಯದ ಕೆಎಸ್‍ಆರ್ ಪಿ ಪೊಲೀಸರಿಗೆ ಯಾಕೆ ಆ ಮಾದರಿಯ ಟ್ರೈನಿಂಗ್ ಕೊಡಬಾರದು ಎಂಬುದರ ಬಗ್ಗೆ ಚಿಂತನೆ ನಡೆಸಿದ್ದರು. ರಕ್ಷಣಾ ಕಾರ್ಯಚರಣೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು? ಪ್ರಕೃತಿ ವಿಕೋಪ, ಗುಡ್ಡ ಕುಸಿತ ಸಂದರ್ಭದಲ್ಲಿ ಸೇರಿದಂತೆ ಎನ್ ಡಿ ಆರ್ ಎಫ್ ಮಾದರಿಯಲ್ಲಿ ಟ್ರೈನಿಂಗ್ ಕೊಡಲು ಪ್ಲಾನ್ ಮಾಡಿದ್ದರು.

ರಾಜ್ಯದ ಕೆಎಸ್ ಆರ್ ಪಿಯಲ್ಲಿ 14 ಸಾವಿರ ಸಿಬ್ಬಂದಿಗಳಿದ್ದು, ಅವರನ್ನ ಕೇವಲ ಬಂದ್, ಬಂದೋಬಸ್ತ್, ಲಾಠಿ ಚಾರ್ಜ್ ಸಂದರ್ಭಗಳಿಗೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಬೇರೆ ಸಮಯದಲ್ಲಿ ಬಸ್ಸ್ ನಲ್ಲಿ ಕುಳಿತು ಸುಮ್ಮನೆ ಕಾಲಹರಣ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಒಟ್ಟು 12 ಕೆಎಸ್ ಆರ್ ಪಿ ಬೆಟಾಲಿಯನ್ ಗಳಲ್ಲಿ ಒಂದು ಬೆಟಾಲಿಯಾನ್ ನಿಂದ ಮಹಿಳೆ ಮತ್ತು ಪುರುಷರ 40 ಜನರ ತಂಡ ರಚನೆ ಮಾಡಿ ಈ ಟ್ರೈನಿಂಗ್ ಗೆ ಬಳಸಿಕೊಳ್ಳಲಾಗುತ್ತಿದೆ. ಚಿತ್ರದುರ್ಗದ ವಾಣಿ ವಿಲಾಸ್ ಡ್ಯಾಮ್ ನಲ್ಲಿ ತರಬೇತಿ ನೀಡಲಾಗುತ್ತಿದ್ದು, ವಾಟರ್ ರೆಸ್ಕ್ಯೂ, ರಿವರ್ ರಾಪ್ಟಿಂಗ್, ಸ್ಕೊಬಾ ಡೈವಿಂಗ್, ಬೆಟ್ಟ ಹತ್ತುವುದು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಹೆಚ್ಚಿನದಾಗಿ ಹಿರಿಯರು, ಮಹಿಳೆಯರು ಮಕ್ಕಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತಿದೆ ಎಂದು ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

ಇಲ್ಲಿ ತರಬೇತಿ ಪಡೆದ ಮೊದಲ ತಂಡವನ್ನು ಬೆಂಗಳೂರಿನ ಕೆಲ ತುರ್ತು ಪರಿಸ್ಥಿತಿ ವೇಳೆ ಬಳಸಿಕೊಳ್ಳುವುದು. ಬಳಿಕ ಹಂತ ಹಂತವಾಗಿ ಜಿಲ್ಲೆಗಳಿಗೆ ಬಳಸಿಕೊಳ್ಳಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಕೆಎಸ್ ಆರ್ ಪಿ ಪೊಲೀಸರು ಕೇವಲ ಬಂದ್, ಬಂದೋಬಸ್ತ್ ನೆಪದಲ್ಲಿ ಕಾಲಹರಣ ಮಾಡೋದು ಬಿಟ್ಟು ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿರೋದು ಸಂತಸದ ಸಂಗತಿ ಎಂದು ಸಾರ್ವಜನಿಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *