ಪ್ರತ್ಯೇಕ ಕನ್ನಡ ಧ್ವಜಕ್ಕೆ ಅಂಗೀಕಾರ – ಶೀಘ್ರವೇ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ

ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಅನ್ನೋ ಕೂಗಿಗೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ ಕರ್ನಾಟಕಕ್ಕೆ ನೂತನ ನಾಡಧ್ವಜವನ್ನ ಅಂಗೀಕಾರ ಮಾಡಿದೆ.

ಗೃಹ ಕಚೇರಿ ಕೃಷ್ಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ನಾಡಧ್ವಜ ಸಮಿತಿ ನೀಡಿದ್ದ ನಾಡಧ್ವಜವನ್ನೆ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ನೂತನ ನಾಡಧ್ವಜವನ್ನ ಅನಾವರಣಗೊಳಿಸಿದ್ರು. ಹಳದಿ, ಬಿಳಿ ಮಧ್ಯೆ ಕರ್ನಾಟಕ ಸರ್ಕಾರದ ಲಾಂಛನ ಕೆಂಪು ಬಣ್ಣದ ತ್ರಿವರ್ಣ ನಾಡಧ್ವಜವನ್ನ ಸಿಎಂ ಪ್ರದರ್ಶನ ಮಾಡಿದ್ರು.

ಹಳದಿ ಸಮೃದ್ಧಿಯ ಸಂಕೇತ, ಬಿಳಿ ಶಾಂತಿಯ ಸಂಕೇತ, ಕೆಂಪು ಸ್ವಾಭಿಮಾನ ಹಾಗೂ ಧೈರ್ಯದ ಸಂಕೇತವಾಗಿದೆ. ನಾಡಧ್ವಜ ರಚಿಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಸಮಿತಿ ರಾಜ್ಯದ ಇತಿಹಾಸ, ಕಾನೂನಿನ ಇತಿಮಿತಿಗಳನ್ನ ಅಧ್ಯಯನ ಮಾಡಿ 3 ಬಣ್ಣಗಳ ಧ್ವಜ ನೀಡಿತ್ತು. ಸರ್ಕಾರ ಇದನ್ನ ಒಪ್ಪಿಕೊಂಡು, ನಾಡಧ್ವಜವಾಗಿ ಅಂಗೀಕಾರ ಮಾಡಿದೆ. ಶೀಘ್ರವೇ ನಾಡಧ್ವಜ ಅಂಗೀಕಾರ ಮಾಡುವಂತೆ ಕೇಂದ್ರಕ್ಕೆ ಕಳಿಸಲಾಗುತ್ತೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು.

ಸಭೆಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್ ಶೆಟ್ಟಿ, ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು, ಚಂದ್ರಶೇಖರ ಕಂಬಾರ, ಚಂಪಾ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸಿ ನಾಡಧ್ವಜಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ರು.

Comments

Leave a Reply

Your email address will not be published. Required fields are marked *