ಕಾವೇರಿ ಬಳಿಕ ತಮಿಳುನಾಡಿನಿಂದ ಮತ್ತೊಂದು ಕಿರಿಕ್

ನವದೆಹಲಿ: ಕೋಲಾರ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಮಾರ್ಕಂಡೇಯ ಜಲಾಶಯದಿಂದ ನಮಗೆ ತೊಂದರೆಯಾಗಲಿದ್ದು, ನಾಲ್ಕು ಜಿಲ್ಲೆಗಳ ನದಿ ಪಾತ್ರ ಮತ್ತು ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ತಮಿಳುನಾಡು ಆರೋಪಿಸಿದೆ.

ಇಂದು ದೆಹಲಿಯ ಸೇವಾ ಭವನದಲ್ಲಿ ನಡೆದ ತಜ್ಞರ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ್ದ ತಮಿಳುನಾಡಿನ ಪರ ಅಧಿಕಾರಿಗಳು ಮಾರ್ಕಂಡೇಯ ಜಲಾಶಯ ಯೋಜನೆ ವಿರೋಧಿಸಿ ದಾಖಲೆಗಳು ಸಲ್ಲಿಸಿದರು. ಈ ಯೋಜನೆಯಿಂದ ಪೆನ್ನಾರ್ ನದಿಯ ನೈಸರ್ಗಿಕ ಹರಿವಿಗೆ ತೊಂದರೆಯಾಗಲಿದೆ. 4 ಜಿಲ್ಲೆಗಳಲ್ಲಿ ಹರಿಯುವ ನದಿ ಪಾತ್ರಕ್ಕೆ ತೊಂದರೆಯಾಗಲಿದ್ದು ಮತ್ತು ಕೃಷಿ ಮತ್ತು ಕುಡಿಯುವ ನೀರಿಗೆ ಕೊರತೆ ಉಂಟಾಗಲಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳ ಆರೋಪಕ್ಕೆ ಪ್ರತ್ಯುತ್ತರ ನೀಡಿದ ರಾಜ್ಯದ ಅಧಿಕಾರಿಗಳು ಪೆನ್ನಾರ್ ನದಿಯ ದಕ್ಷಿಣ ವ್ಯಾಪ್ತಿಯ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ನೈಸರ್ಗಿಕ ನೀರಿನ ಹರಿವಿಗೆ ತೊಂದರೆ ಇಲ್ಲ ತಮಿಳುನಾಡು ಆರೋಪಕ್ಕೆ ಉತ್ತರಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ರಾಜ್ಯದ ಅಧಿಕಾರಿಗಳ ಮನವಿ ಹಿನ್ನಲೆ ಮಾರ್ಚ್ 10ಕ್ಕೆ ಮತ್ತೊಂದು ಸಭೆ ನಡೆಸಲು ಸಮಿತಿ ನಿರ್ಧಿರಿಸಿದೆ.

ಕೋಲಾರ ಜಿಲ್ಲೆಯಲ್ಲಿ ಮಾರ್ಕಂಡೇಯ ಜಲಾಶಯ ನಿರ್ಮಾಣ ವಿಚಾರ ಸಂಬಂಧಿಸಿದಂತೆ ನ್ಯಾಯಾಧೀಕರಣ ರಚಿಸುವಂತೆ ತಮಿಳುನಾಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ತಮಿಳುನಾಡಿನ ಮನವಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಜ್ಞರನ್ನೊಳಗೊಂಡ ಸಮಾಲೋಚನಾ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ಇಂದು ಮೊದಲ ಸಭೆ ನಡೆಸಿತ್ತು.

Comments

Leave a Reply

Your email address will not be published. Required fields are marked *