21 ದಿನಗಳ ಸುದೀರ್ಘ ಬಂದ್ – ಮಹತ್ವದ ಕೆಲಸಕ್ಕೆ ಮುಂದಾದ ಬಿಜೆಪಿ

ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ್ ಬಂದ್‍ಗೆ ಕರೆ ನೀಡಿದ್ದು ಈ ನಡುವೆ ಸಂಕಷ್ಟ ಎದುರಿಸುವ ಜನರ ನೆರವಿಗೆ ಬಿಜೆಪಿ ಮುಂದಾಗಿದೆ.

ಭಾರತ ಬಂದ್ ನಡುವೆ ಹಸಿದವರ ಹೊಟ್ಟೆ ತುಂಬಿಸಲು ಬಿಜೆಪಿ ನಿರ್ಧರಿಸಿದ್ದು, 21 ದಿನಗಳ ಅವಧಿಯಲ್ಲಿ 5 ಕೋಟಿ ಜನರಿಗೆ ಉಚಿತ ಆಹಾರ ನೀಡುವ ಸಂಕಲ್ಪ ಮಾಡಿದೆ. ಭಾರತ ಬಂದ್ ಹಿನ್ನೆಲೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಬಂದ್ ವೇಳೆ ಸಂಕಷ್ಟಕ್ಕೆ ಸಿಲುಕುವ ಜನರ ನೆರವು ನೀಡುವ ಬಗ್ಗೆ ಚರ್ಚೆ ಮಾಡಲಾಯಿತು.

21 ದಿನಗಳ ಸುದೀರ್ಘ ಬಂದ್ ನಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ನಿರಾಶ್ರಿತರು ಊಟ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ನಿರಾಶ್ರಿತರಿಗೆ ಉಚಿತ ಆಹಾರ ಹಂಚುವ ಕಾರ್ಯ ಮಾಡಬೇಕು ಎಂದು ತಿರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಈ ನಿರ್ಧಾರದ ಬಳಿಕ ಎಲ್ಲ ರಾಜ್ಯಗಳ ಬಿಜೆಪಿ ರಾಜ್ಯಧ್ಯಕ್ಷರಿಗೂ ಈ ಮಾಹಿತಿ ರವಾನೆ ಮಾಡಿದ್ದು, ಕಾರ್ಯಕರ್ತರ ಮೂಲಕ ನೆರವಿನ ಹಸ್ತ ಚಾಚುವಂತೆ ಜೆ.ಪಿ ನಡ್ಡಾ ಸೂಚಿಸಿದ್ದಾರೆ.

ಈ ಸಂಬಂಧ ಪ್ರತಿನಿತ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು ಜೆ.ಪಿ ನಡ್ಡಾ ಅವರು ರಾಜ್ಯವಾರು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ. ಪ್ರಧಾನಿ ಮೋದಿ ಭಾರತ ಬಂದ್ ಘೋಷಿಸಿದ ಬಳಿಕ ಸಾಮಾನ್ಯ ಜನರು ಯಾರು ಹಸಿವಿನಿಂದ ಬಳಲಬಾರದು ಸುತ್ತಲಿನ ಜನರು ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *