ಸ್ನೇಹಿತನಿಂದ ಚಾಕು ಇರಿತ – 7 ವರ್ಷದ ಮಗನ ಮುಂದೆಯೇ ದಂಪತಿ ಸಾವು

ನವದೆಹಲಿ: 7 ವರ್ಷದ ತಮ್ಮ ಮಗನ ಮುಂದೆಯೇ ತಂದೆ, ತಾಯಿಯನ್ನು ವ್ಯಕ್ತಿಯೊಬ್ಬ ಕೊಲೆಗೈದ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ದಂಪತಿಯನ್ನು ದುಂಡೇಹಾರದ ನಿವಾಸಿಗಳಾದ ವಿಕ್ರಮ್ ಸಿಂಗ್ ಮತ್ತು ಅವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ವಿಕ್ರಮ್ ಸಿಂಗ್ ಅವರ ಸ್ನೇಹಿತ ಅಭಿನವ್ ಕೊಲೆ ಮಾಡಿ ಸ್ಥಳೀಯರ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಅಭಿನವ್ ವಿಕ್ರಮ್ ಸಿಂಗ್ ಅವರ ಸ್ನೇಹಿತನಾಗಿದ್ದು, ವಿಕ್ರಮ್ ವಿದೇಶದಲ್ಲಿ ನಿನಗೆ ಕೆಲಸ ಕೊಡುಸುತ್ತೇನೆ ಎಂದು ಹೇಳಿ ಅಭಿನವ್ ಬಳಿ 1.5 ಲಕ್ಷ ರೂ ಪಡೆದುಕೊಂಡಿದ್ದಾನೆ. ಆದರೆ ಅಭಿನವ್‍ಗೆ ಕೆಲಸ ಕೊಡಿಸಲು ವಿಕ್ರಮ್‍ನಿಂದ ಸಾಧ್ಯವಾಗಿಲ್ಲ. ಈ ವಿಚಾರಕ್ಕೆ ಈ ಇಬ್ಬರ ನಡುವೆ ಜಗಳವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಲು ತಡರಾತ್ರಿ ಅಭಿನವ್ ವಿಕ್ರಮ್ ಸಿಂಗ್ ಅವರ ಮನೆಗೆ ಬಂದಿದ್ದಾನೆ. ಇಬ್ಬರು ಕುಳಿತು ಮದ್ಯಪಾನ ಮಾಡಿದ್ದಾರೆ. ನಂತರ ಅಭಿನವ್ ಮತ್ತು ವಿಕ್ರಮ್ ಕೆಲಸದ ವಿಚಾರವಾಗಿ ಮತ್ತೆ ಮನೆಯಲ್ಲಿ ಜಗಳವಾಡಿದ್ದಾರೆ. ಈ ವೇಳೆ ಅಭಿನವ್ ಚಾಕುವಿನಿಂದ ವಿಕ್ರಮ್‍ಗೆ ಇರಿದಿದ್ದಾನೆ. ಗಂಡನನ್ನು ಬಿಡಿಸಿಕೊಳ್ಳಲು ಬಂದ ಪತ್ನಿ ಜ್ಯೋತಿಯನ್ನು ಕೂಡ ಅಭಿನವ್ ಇರಿದು ಇಬ್ಬರನ್ನು ಕೊಲೆ ಮಾಡಿದ್ದಾನೆ.

ಈ ಸಮಯದಲ್ಲಿ ಮನೆಯೊಳಗೆ ಗಲಾಟೆಯಾಗುತ್ತಿದ್ದನ್ನು ಗಮನಿಸಿದ ನೆರೆಹೊರೆಯವರು ಬಾಗಿಲು ಮುರಿದು ಮನೆಯೊಳಗೆ ಬಂದಿದ್ದಾರೆ. ಈ ವೇಳೆ ಇರಿತಕ್ಕೆ ಒಳಗಾಗಿದ್ದ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ದಂಪತಿಯ 7 ವರ್ಷದ ಮಗ ಭಯಭೀತನಾಗಿ ನಿಂತಿದ್ದ. ಸ್ಥಳೀಯರು ಆರೋಪಿ ಅಭಿನವ್‍ನನ್ನು ರೆಡ್‍ಹ್ಯಾಂಡ್ ಆಗಿ ಹಿಡಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ ಬೆರಾಮ್ ಸಿಂಗ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *