ಮಣ್ಣಿನಲ್ಲಿ ಹೂತು ಹಾಕಿದ್ದ ನವಜಾತ ಗಂಡು ಶಿಶು ಜೀವಂತವಾಗಿ ಪತ್ತೆ

ಚಿಕ್ಕಬಳ್ಳಾಪುರ: ಆಗ ತಾನೇ ಜನಿಸಿದ್ದ ನವಜಾತ ಗಂಡು ಶಿಶುವನ್ನು ಮಣ್ಣಲ್ಲಿ ಹೂತು ಹಾಕಿದ್ದ ಅಮಾನವೀಯ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗಡದಾಸರಹಳ್ಳಿ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಹೊರವಲಯದ ರೇಷ್ಮೆ ತೋಟವೊಂದರಲ್ಲಿ ನವಜಾತು ಗಂಡು ಶಿಶು ಮಣ್ಣಿನಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೇಷ್ಮೆ ತೋಟದಲ್ಲಿ ಕಾಗೆಗಳ ಹಾರಾಟ-ಚೀರಾಟ ಕಂಡ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಮಣ್ಣಿನಲ್ಲಿ ಹೂತು ಹಾಕಲಾಗಿದ್ದ ಮಗು ಪತ್ತೆಯಾಗಿದೆ.

ಕೂಡಲೇ ಮಾಹಿತಿ ತಿಳಿದ ಸ್ಥಳೀಯ ಕುರುಬೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯೆ ಪೂರ್ಣಿಮಾ, ಸ್ಥಳೀಯ ಆಶಾ ಕಾರ್ಯಕರ್ತೆಯ ಸಹಾಯದಿಂದ ಮಗುವನ್ನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ನೀಡಿದ್ದಾರೆ. ಸದ್ಯ ಮಗುವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಎನ್‍ಐಸಿಯು ಘಟಕಕ್ಕೆ ರವಾನಿಸಲಾಗಿದೆ.

ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವಧಿಗೂ ಮುನ್ನ ಮಗು ಜನನವಾಗಿರುವುದಕ್ಕೆ ಅಥವಾ ಅನೈತಿಕ ಸಂಬಂಧದಿಂದ ಜನಿಸಿದೆ ಎಂದು ಮಗುವನ್ನ ಮಣ್ಣಿನಲ್ಲಿ ಹೂತು ಹಾಕಿರಬಹುದು ಅಂತ ಸ್ಥಳೀಯ ಗ್ರಾಮಸ್ಥರು ಹೇಳುತ್ತಿದ್ದಾರೆ.

ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *