ನಾನು ಬರಲ್ಲವೆಂದು ಹಠ ಹಿಡಿದ ವಯೋವೃದ್ಧೆಯ ರಕ್ಷಣೆ

ಬೆಳಗಾವಿ: ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಈ ವೇಳೆ ವಯೋವೃದ್ಧೆಯೊಬ್ಬರು ನಾನು ಮನೆ ಬಿಟ್ಟು ಬರಲ್ಲವೆಂದು ಹಠ ಹಿಡಿದು ಕುಳಿತ ಪ್ರಸಂಗವೊಂದು ನಡೆದಿದೆ.

ಹೌದು. ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಊಟ-ಉಪಹಾರವಿಲ್ಲದೆ ನಡು ನೀರಿನಲ್ಲಿಯೇ ಮನೆಯಲ್ಲಿ ವಯೋವೃದ್ಧೆ ಕುಳಿತಿದ್ದರು. ಈ ವೇಳೆ ಅವರನ್ನು ರಕ್ಷಣೆ ಮಾಡಲು ಎನ್‍ಡಿಆರ್‍ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡ ದೋಣಿ ಮೂಲಕ ತೆರಳಿದೆ. ಆದರೆ ಆಕೆ `ನಾನು ಬರಲ್ಲ’ ಎಂದು ಹಠ ಹಿಡಿದು ಕುಳಿತ ಘಟನೆ ನಡೆಯಿತು.

ಕೊನೆಗೆ ಒತ್ತಾಯವಪೂರ್ವಕವಾಗಿ ವಯೋವೃದ್ಧೆಯನ್ನು ರಕ್ಷಣಾ ತಂಡದ ಸಿಬ್ಬಂದಿ ಎತ್ತಿಕೊಂಡು ದೋಣಿಯಲ್ಲಿ ಕುಳ್ಳಿರಿಸಿದ್ದಾರೆ. ಆಗಲೂ ಮಹಿಳೆ ನಾನು ಮನೆ ಬಿಟ್ಟು ಬರಲ್ಲ ಎಂದು ಕೂಗಾಡಿದ್ದಾರೆ.

ತುಂಬಿದ ನದಿಯಲ್ಲಿ ಮಿಲಿಟರಿ ತಂಡ ಮಹಿಳೆಯನ್ನು ಕರೆತಂದಿದ್ದಾರೆ. ದಡ ಸೇರಿದ ಮಲೆ ಮಹಿಳೆ ಮತ್ತೆ ರಂಪ ಮಾಡಿದ್ದು, ನನ್ನ ಗಂಟು ಅಲ್ಲಿಯೇ ಉಳಿದಿದೆ ಅದನ್ನು ತರಬೇಕು ಎಂದು ಹಠ ಹಿಡಿದಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಬೈದು ಮಹಿಳೆಯನ್ನು ಅಂಬ್ಯುಲೆನ್ಸ್ ನಲ್ಲಿ ಕಳುಹಿಸಿದ್ದಾರೆ.

ಇತ್ತ ಮಲಪ್ರಭಾ ನದಿಯಲ್ಲಿ ಕಳೆದ ನಾಲ್ಕು ದಿನಗಳಿಂದ ನೀರಿನಲ್ಲಿ ಹಂದಿಗಳು ಸಿಲುಕಿಕೊಂಡಿವೆ. ಈ ಹಿಂಡಿನಿಂದ ಹಂದಿಮರಿಯೊಂದು ಬೇರೆಯಾಗಿದ್ದು, ನಡು ನೀರಿನಲ್ಲಿ ಸಿಲುಕಿದ ಹಂದಿಗಳು ಪರದಾಡಿವೆ.

ಹಳ್ಯಾಳ್ ಜಾಕ್ ವೆಲ್ ನಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರರಾದ ಶಾಂತಯ್ಯ, ಜಯಣ್ಣ, ರೇಣುಕಾ ಕದಂ ಇವರನ್ನು ಎನ್‍ಡಿಆರ್‍ಎಫ್ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ. ಈ ವೇಳೆ ತಂಡಕ್ಕೆ ಪಬ್ಲಿಕ್ ಟಿವಿ ಕೂಡ ಸಾಥ್ ನೀಡಿದ್ದು, ಬದುಕುಳಿದ ಮೂವರು ಕಾರ್ಮಿಕರು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಬದುಕುಳಿದು ಬಂದ ಮನೆಯವರಲ್ಲಿ ಸಂಭ್ರಮ ಮುಗಿಲು ಮುಟ್ಟಿತು.

ಈ ಮೂವರು ಕಳೆದ 4 ದಿನಗಳಿಂದ ಮಲಪ್ರಭಾ ನದಿ ಪ್ರವಾಹದಿಂದಾಗಿ ಮಠದ ಮೇಲೇರಿ ಕುಳಿತಿದ್ದರು. ಸದ್ಯ ಸಂತ್ರಸ್ತರು ಸುರಕ್ಷಿತವಾಗಿ ದಡ ಸೇರಿದ್ದಾರೆ.

Comments

Leave a Reply

Your email address will not be published. Required fields are marked *