ಇಮ್ರಾನ್ ಖಾನ್ ಕಿಂಗ್ ಆಫ್ ಹಾರ್ಟ್ಸ್ ಎಂದ ಸಿಧು

ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಿಂಗ್ ಆಫ್ ಹಾರ್ಟ್ಸ್ ಎಂದು ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಹಾಡಿ ಹೊಗಳಿದ್ದಾರೆ.

ಪಾಕಿಸ್ತಾನದ ಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕಿಂಗ್ ಆಫ್ ಹಾರ್ಟ್ಸ್, ನಿಮಗೆ ಧನ್ಯವಾದಗಳು. ಸಿಕಂದರ್(ಅಲೆಕ್ಸಾಂಡರ್) ಭಯದಿಂದ ಜಗತ್ತನ್ನು ಗೆದ್ದರೆ, ನೀವು ಪ್ರಪಂಚದಾದ್ಯಂತ ಹೃದಯಗಳನ್ನು ಗೆದ್ದಿದ್ದೀರಿ ಎಂದು ಹಾಡಿ ಹೊಗಳಿದರು.

ವಿಭಜನೆಯ ಸಂದರ್ಭದಲ್ಲಿ ಪಂಜಾಬ್‍ನ ಎರಡೂ ಕಡೆಯವರು ರಕ್ತದೋಕುಳಿ ಆಡಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಸೇರಿ ಜನರ ಗಾಯಗಳಿಗೆ ಕರ್ತಾರ್‍ಪುರ ಕಾರಿಡಾರ್ ಮೂಲಕ ಮುಲಾಮನ್ನು ಹಚ್ಚಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ವಿಭಿನ್ನವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದು, ಕರ್ತಾರ್‍ಪುರ ಕಾರಿಡಾರ್ ಯೋಜನೆ ಸ್ಥಾಪಿಸಿ, ಸಿಖ್ಖರಿಗೆ ದರ್ಬಾರ್ ಸಾಹಿಬ್ ಪ್ರವೇಶಿಸಲು ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಮುನ್ನಾಭಾಯ್ ಎಂಬಿಬಿಎಸ್ ಶೈಲಿಯ ಅಪ್ಪುಗೆಯನ್ನು ಕಳಿಹಿಸುವುದಾಗಿ ಹೇಳಿದ್ದಾರೆ. ನಾನು ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ನನ್ನ ಜೀವನ ಗಾಂಧಿ ಕುಟುಂಬಕ್ಕೆ ಸಮರ್ಪಿತವಾಗಿದ್ದರೂ ಪರವಾಗಿಲ್ಲ. ನಿಮಗೆ ಮುನ್ನಾಭಾಯ್ ಎಂಬಿಬಿಎಸ್ ಶೈಲಿಯ ಅಪ್ಪುಗೆಯನ್ನು ಕಳುಹಿಸುತ್ತೇನೆ ಎಂದು ಕರ್ತಾರ್‍ಪುರ್ ಕಾರಿಡಾರ್‍ಗಾಗಿ ಧನ್ಯವಾದ ತಿಳಿಸಿದರು.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ದೀರ್ಘಕಾಲದಿಂದ ಜಗಳ ನಡೆಯುತ್ತಿರುವುದರ ನಡುವೆ ಸಿಧು ಈ ಹೇಳಿಕೆ ನೀಡಿದ್ದಾರೆ. ಸಿಧು ಕರ್ತಾರ್‍ಪುರಕ್ಕೆ ಪ್ರಯಾಣಿಸಿದ ನಿಯೋಗದಲ್ಲಿ ಇವರೂ ಒಬ್ಬರಾಗಿದ್ದಾರೆ. ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಂತರ ಕ್ಯಾಪ್ಟರ್ ಸಿಂಗ್ ಹಾಗೂ ಸಿಧು ನಡುವಿನ ದ್ವೇಷ ಇನ್ನೂ ಹೆಚ್ಚಾಗಿದೆ. ಪಂಜಾಬ್ ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನದಿಂದ ಹೊರಗುಳಿದ ಸಿಧು, ದುಃಖಿತರಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಈ ಸಮಾರಂಭದಲ್ಲಿ ಸಿಧು ಭಾಗವಹಿಸುವಿಕೆ ಪ್ರಾರಂಭದಲ್ಲಿ ಅನುಮಾನವಿತ್ತು. 1980ರ ದಶಕದಲ್ಲಿ ಕ್ರಿಕೆಟ್ ಮೈದಾನದಲ್ಲಿ ಅವರ ಸಮಕಾಲೀನರಾಗಿದ್ದ ಪ್ರಧಾನಿ ಖಾನ್, ಸಿಧು ಅವರಿಗೆ ಆಹ್ವಾನ ನೀಡಿದ್ದರು. ಇಂತಹ ಎಲ್ಲ ಆಮಂತ್ರಣಗಳಿಗೆ ರಾಜಕೀಯ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದಾದ ನಂತರ ಸಿಧು ಸಮಾರಂಭಕ್ಕೆ ತೆರಳಿದ್ದಾರೆ.

Comments

Leave a Reply

Your email address will not be published. Required fields are marked *