ಗ್ರಾಮೀಣ ರಸ್ತೆಗೆ ಗೋಡ್ಸೆ ಹೆಸರು – ಪೊಲೀಸರ ಸಮ್ಮುಖದಲ್ಲಿ ತೆರವು

ಉಡುಪಿ: ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಹೆಸರನ್ನು ಕಾರ್ಕಳ ತಾಲೂಕಿನ ಬೋಳ ಗ್ರಾಮದ ರಸ್ತೆಗೆ ನಾಮಕರಣ ಮಾಡಲಾಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೋಳ ಗ್ರಾಮಪಂಚಾಯತ್‍ನ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ರಸ್ತೆ ಎಂದು 2 ದಿನಗಳ ಹಿಂದೆ ಸಿಮೆಂಟಿನ ಬೋರ್ಡ್ ಒಂದನ್ನು ಅಳವಡಿಸಲಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾರ್ಕಳ ಯುವ ಕಾಂಗ್ರೆಸ್ ಇದನ್ನು ಖಂಡಿಸಿದೆ. ಬೋಳ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿದ ಯುವ ಕಾಂಗ್ರೆಸ್ ಮುಖಂಡರು ಪಿಡಿಒಗೆ ಮನವಿ ಕೊಟ್ಟಿದ್ದಾರೆ. ಜೊತೆಗೆ ಬೋರ್ಡನ್ನು ತೆರವುಗೊಳಿಸದಿದ್ದರೆ ನಾಳೆಯೇ ಹೋರಾಟ ನಡೆಸುತ್ತೇವೆ. ಪಂಚಾಯತ್ ಮುಂದೆ ನಿರಂತರ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ದನದ ಬುರುಡೆ ಕಟ್ಟಿ ಕಿಡಿಗೇಡಿಗಳಿಂದ ವಿಕೃತಿ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಚಾಯತ್ ಪಿಡಿಒ ರಾಜೇಂದ್ರ, ಬೋರ್ಡ್ ಅಳವಡಿಸಿರುವ ಬಗ್ಗೆ ಪಂಚಾಯತ್‍ಗೆ ಯಾವುದೇ ಮಾಹಿತಿ ಇಲ್ಲ. ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯಗಳು ಆಗಿಲ್ಲ ಎಂದರು. ಇದಾಗಿ ಕೆಲವೇ ಹೊತ್ತಿನಲ್ಲಿ ಬೋಳ ಪಂಚಾಯತ್ ಸಿಬ್ಬಂದಿ ಮತ್ತು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೋಡ್ಸೆ ಹೆಸರಿನ ಬೋರ್ಡನ್ನು ತೆರವುಗೊಳಿಸಿದ್ದಾರೆ. ಒಬ್ಬ ವ್ಯಕ್ತಿ ತನ್ನ ಮನೆಗೆ ಹೋಗುವ ರಸ್ತೆಗೆ ಈ ರೀತಿಯ ನಾಮಫಲಕವನ್ನು ಅಳವಡಿಸಿದ್ದಾರೆ ಎನ್ನಲಾಗಿದೆ. ಯುವ ಕಾಂಗ್ರೆಸ್ ಮನವಿ ಮೇರೆಗೆ ಪಂಚಾಯತ್ ಮತ್ತು ಪೊಲೀಸರ ಸಮ್ಮುಖದಲ್ಲಿ ಬೋರ್ಡ್ ತೆರವುಗೊಳಿಸಲಾಯಿತು. ಇದನ್ನೂ ಓದಿ: ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದ ಪತ್ನಿ ಪ್ಲ್ಯಾನ್ ಫ್ಲಾಪ್

Comments

Leave a Reply

Your email address will not be published. Required fields are marked *