ಡಿಸ್ಚಾರ್ಜ್ ಆದ್ರೂ ಮನೆಗೆ ಹೋಗಲ್ಲ ಎಂದ ಜ್ಯೂಬಿಲಿಯೆಂಟ್ ನೌಕರ

– ಸರ್ಕಾರಕ್ಕೆ, ಆಸ್ಪತ್ರೆ ಸಿಬ್ಬಂದಿಗೆ ಪತ್ರದ ಮೂಲಕ ಧನ್ಯವಾದ
– ಮೈಸೂರಿನಲ್ಲಿ ಮತ್ತೆ 5 ಸೋಂಕಿತ ಪ್ರಕರಣ ದೃಢ

ಮೈಸೂರು: ಜಿಲ್ಲೆಯಲ್ಲಿ ಸದ್ಯ 42 ಇರುವ ಸೋಂಕಿತರ ಸಂಖ್ಯೆ ಇನ್ನೇರಡು ದಿನಕ್ಕೆ 50ರ ಗಡಿ ದಾಟುತ್ತೆ ಎನ್ನಲಾಗಿದೆ. ಹೀಗಾಗಿ ಮೈಸೂರಿನಲ್ಲಿ ಆತಂಕದ ಕಾರ್ಮೋಡ ದಿನದಿನಕ್ಕೂ ಹೆಚ್ಚಾಗ್ತಿದೆ. ಈ ನಡುವೆ ಸೋಂಕು ಹರಡಿದ ಜ್ಯೂಬಿಲಿಯೆಂಟ್ ಕಾರ್ಖಾನೆ ಕಾರ್ಮಿಕ ರೋಗಿ 52 ಸೋಂಕು ಮುಕ್ತರಾಗಿದ್ದಾರೆ. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರೂ ಮನೆಗೆ ಹೋಗಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಇಂದು ಮತ್ತೆ 5 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 8 ವರ್ಷದ ಬಾಲಕ ಹಾಗೂ ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರೊಬ್ಬರ ಪುತ್ರ ಹಾಗೂ ಪತ್ನಿಗೂ ಸೋಂಕು ಹರಡಿದ್ದು, ಜ್ಯೂಬಿಲಿಯೆಂಟ್ ಕಾರ್ಖಾನೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.

ಇಡೀ ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸೋಂಕು ಹರಡಿಸಿದ್ದ ರೋಗಿ 52 ಮೈಸೂರಿನ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರೋಗಿ 52 ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ ಬರೆದಿದ್ದು, ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ನನಗೆ 10 ದಿನಗಳ ಹಿಂದೆ ಜ್ವರ ಇತ್ತು. ಮೊದಲು ಸ್ಥಳೀಯ ಕ್ಲಿನಿಕ್‍ಗೆ ತೋರಿಸಿದ್ದೆ, ಮಾರ್ಚ್ 21ರಂದು ನಾನು ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರ ಮಾರ್ಚ್ 25ರಂದು ಕೆ.ಆರ್ ಆಸ್ಪತ್ರೆಗೆ ಕರೆತಂದರು. ನನಗೆ ಎಲ್ಲಾ ರೀತಿಯ ಪರೀಕ್ಷೆ ಮಾಡಿದರು ಲಸಿಕೆ ಹಾಕಿದರು. ಮಾರ್ಚ್ 30ರಂದು ನನ್ನನ್ನ ಇಡಿ ಆಸ್ಪತ್ರೆಗೆ ಕಳುಹಿಸಿದರು. 14 ದಿನಗಳ ಕಾಲ ನನಗೆ ಚಿಕಿತ್ಸೆ ನೀಡಿ, ನನ್ನನ್ನು ಗುಣಮುಖರನ್ನಾಗಿ ಮಾಡಿದ್ದಾರೆ. ಕೊರೊನಾ ಪೀಡಿತರನ್ನ ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಎಲ್ಲರೂ ಸರ್ಕಾರಕ್ಕೆ ಸಹಕಾರ ನೀಡಿ ಎಂದು ಹೇಳಿದ್ದಾರೆ. ಈ ಮಾತನ್ನು ಹೇಳಿದ್ದರೂ ತಾನು ಮಾತ್ರ ಈಗಲೇ ಮನೆಗೆ ಹೋಗಲ್ಲ ಎಂದು ಹೇಳಿ ಸರ್ಕಾರಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಸೋಂಕು ಹರಡಿದ ವ್ಯಕ್ತಿ ಸೋಂಕಿನಿಂದ ಮುಕ್ತವಾದರೂ ಕೂಡ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಸೋಂಕಿತ ಕಾರ್ಮಿಕರ ಕುಟುಂಬದ ಒಳಗೆ ಈ ಚೈನ್ ಬೆಳೆಯುತ್ತಿರುವುದು ಅತಿ ದೊಡ್ಡ ಆತಂಕದ ವಿಚಾರವಾಗಿದೆ.

Comments

Leave a Reply

Your email address will not be published. Required fields are marked *