ಸಿಎಂ ಬಿಎಸ್‍ವೈಯನ್ನು ಹಾಡಿಹೊಗಳಿದ ಕಟೀಲ್

ಚಿಕ್ಕೋಡಿ(ಬೆಳಗಾವಿ) : ಸಿಎಂ ವಿರೋಧಿಗಳಿಗೆ ಮಣೆ ಹಾಕಿ ಬಿಎಸ್‍ವೈ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎನ್ನುವ ಆರೋಪ ಸ್ವಪಕ್ಷೀಯರಿಂದಲೇ ಕೇಳಿಬರುತ್ತಿದ್ದರೂ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಯಡಿಯೂರಪ್ಪನವರನ್ನು ಹಾಡಿ ಹೊಗಳಿದ್ದಾರೆ.

ಗಾಂಧೀಜಿ ತತ್ವ ಸಿದ್ಧಾಂತ ಸಾರುವ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಎಸ್‍ವೈಯನ್ನು ಕಟೀಲ್ ಗುಣಗಾನ ಮಾಡಿದ್ದಾರೆ. ನಾನು ದಿನಕ್ಕೆ ಎರಡು ಬಾರಿ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಭಾರತೀಯ ಜನತಾ ಪಾರ್ಟಿಗೆ ಯಡಿಯೂರಪ್ಪ ಸುಪ್ರಿಂ ನಾಯಕ ಎಂದು ಬಣ್ಣಿಸಿದರು.

ಯಾರು ಏನೇ ಬರೆದುಕೊಳ್ಳಲಿ ಅದು ನಮಗೆ ಬೇಕಾಗಿಲ್ಲ. ಪ್ರತಿಯೊಂದು ಹೆಜ್ಜೆಯಲ್ಲಿ ಟೀಕೆ, ಜಗಳ ಹಚ್ಚುವ ಕೆಲಸವಾಗುತ್ತಿದೆ. ಆದರೆ ಅವರ ಜತೆ ನಾನು ದಿನಕ್ಕೆ ಎರಡು ಬಾರಿ ಮಾತನಾಡಿ ನಾನು ಮಾರ್ಗದರ್ಶನ ಪಡೆಯುತ್ತೇನೆ. ರಾಷ್ಟ್ರದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಣೆ ಮಾಡಿದ್ದು ಯಡಿಯೂರಪ್ಪ ಎಂದು ಕೊಂಡಾಡಿದರು.

ಕೇಂದ್ರದಿಂದ ಯಾವಾಗ ನೆರೆ ಪರಿಹಾರ ಸಿಗುತ್ತದೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, ಕೇಂದ್ರದಿಂದ ಪರಿಹಾರ ಬರುವುದಕ್ಕೆ ಮಾರ್ಗದರ್ಶನ ಸೂತ್ರವಿದೆ. ಸಮೀಕ್ಷೆ ನಡೆದು ಸಾವು ನೋವು ಹಾನಿಯ ಬಗ್ಗೆ ಖಚಿತ ಮಾಹಿತಿ ಸಿಗಬೇಕು. ಅದು ಕೇಂದ್ರ ಸರ್ಕಾರಕ್ಕೆ ಅದು ತಲುಪಬೇಕು ಆನಂತರ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಯಡಿಯೂರಪ್ಪ ನರೇಂದ್ರ ಮೋದಿ ಜತೆ ಮಾತನಾಡಿದ್ದು ಅವರು ಸಹ ರಾಜ್ಯಕ್ಕೆ ಬೇಕಾದ ಅನುದಾನ ನೀಡಲು ಒಪ್ಪಿದ್ದಾರೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಬರಲಿದೆ ಯಾವುದೇ ಕಾಳಜಿ ಬೇಡ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಬಾಯಿಗೆ ಬಂದಂತೆ ಯಾವುದೇ ವಿಷಯದ ಬಗ್ಗೆ ಮಾತನಾಡಬೇಡಿ ಎಂದು ಮುಖಂಡರಿಗೆ ನಳೀನ್ ಕುಮಾರ್ ಕಟೀಲ್ ಕಿವಿಮಾತು ಹೇಳಿದರು.

Comments

Leave a Reply

Your email address will not be published. Required fields are marked *