ಮತ್ತೊಂದು ವಿಕೆಟ್ ಪತನ ಸಾಧ್ಯತೆ- ಶೀಘ್ರವೇ ನಾಗೇಂದ್ರ ರಾಜೀನಾಮೆ

ಬಳ್ಳಾರಿ: ಶಾಸಕ ಸ್ಥಾನಕ್ಕೆ ಸಾಲು ಸಾಲಾಗಿ ಶಾಸಕರು ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ 14 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೆ ಮತ್ತಷ್ಟೂ ಶಾಸಕರು ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದಾರೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ಸಲ್ಲಿಸಿದ ನಂತರ ಬಳ್ಳಾರಿ ಜಿಲ್ಲೆಯಿಂದ ಇದೀಗ ಮತ್ತೊಬ್ಬ ಶಾಸಕ ಹಾಗೂ ಸಿದ್ದರಾಮಯ್ಯ ಪರಮಾಪ್ತ ಸಹ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.

ಈ ಹಿಂದಿನಿಂದಲೂ ಅತೃಪ್ತರ ಗುಂಪಿನಲ್ಲಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಇದೀಗ ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿದ್ದು, ರಮೇಶ್ ಜಾರಕಿಹೊಳಿ ಸೂಚನೆ ನೀಡಿದರೆ ಶಾಸಕ ನಾಗೇಂದ್ರ ಇಂದೇ ರಾಜೀನಾಮೆಗೆ ರೆಡಿಯಾಗಿದ್ದಾರೆ. ಆದರೆ ಕಳೆದ ಎರಡು ದಿನಗಳಿಂದ ಶಾಸಕ ನಾಗೆಂದ್ರ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಯತ್ನಿಸುತ್ತಿದ್ದರೂ ಸಂಪರ್ಕಕ್ಕೆ ಸಿಗುತ್ತಿಲ್ಲ.

ಕಳೆದ ದಿನದಿಂದ ಶಾಸಕ ನಾಗೇಂದ್ರ ಕಾಂಗ್ರೆಸ್ ನಾಯಕರಿಗೂ ಸಿಗದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಈ ಹಿಂದೆಯೇ ಶಾಸಕ ನಾಗೇಂದ್ರ ರಾಜೀನಾಮೆ ಸಲ್ಲಿಕೆ ಮಾಡಬೇಕಾಗಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆ ನಾಗೇಂದ್ರ ನಾನು ಇನ್ನೂ 15 ದಿನದಲ್ಲೇ ಮೈತ್ರಿ ಸರ್ಕಾರದಲ್ಲಿ ಸಚಿವನಾಗುವೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ನಾಗೇಂದ್ರ ಅವರನ್ನ ದೂರವಿಟ್ಟು ರಾಜೀನಾಮೆ ಸಲ್ಲಿಕೆ ಮಾಡಿದ್ದರು.

ಇದೀಗ ನಾಗೇಂದ್ರ ರಾಜೀನಾಮೆ ಸಲ್ಲಿಕೆಗೆ ರೆಡಿಯಾಗಿದ್ದರೂ ರಮೇಶ್ ಜಾರಕಿಹೊಳಿ ಗ್ರೀನ್ ಸಿಗ್ನಲ್ ನೀಡದಿರುವುದರಿಂದ ನಾಗೇಂದ್ರ ಪರಿಸ್ಥಿತಿ ಅಲ್ಲಿಯೂ ಇಲ್ಲ ಇಲ್ಲಿಯೂ ಇಲ್ಲದಂತಹದಾಗಿದೆ.

Comments

Leave a Reply

Your email address will not be published. Required fields are marked *