ಸಂಪುಟ ರಚನೆಗೇಕೆ ಮೀನಾಮೇಷ – ವಿ. ಶ್ರೀನಿವಾಸಪ್ರಸಾದ್ ಪ್ರಶ್ನೆ

ಮೈಸೂರು: ಪೂರ್ಣಪ್ರಮಾಣದ ಸಂಪುಟ ರಚನೆಗೆ ಮೀನಾಮೇಷ ಎಣಿಸುತ್ತಿರುವುದು ಸರಿ ಅಲ್ಲ. ಪಕ್ಷ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಪೂರ್ಣ ಪ್ರಮಾಣದ ಸಂಪುಟ ರಚನೆ ಆಗಬೇಕು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೂರ್ಣ ಪ್ರಮಾಣದ ಸಂಪುಟ ರಚನೆ ವರಿಷ್ಠರಿಗೆ ದೊಡ್ಡ ಸಮಸ್ಯೆನಾ? ಎಂದು ಪ್ರಶ್ನಿಸಿದರು. ನನ್ನ ದೃಷ್ಠಿಯಿಂದ ಸರ್ಕಾರ ರಚನೆಯಾಗಲು ಸಹಕರಿಸಿದ ಎಲ್ಲರನ್ನೂ ಮಂತ್ರಿ ಮಾಡಬೇಕು ಎಂದು ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ತಿಳಿಸಿದರು.

ಶೀಘ್ರದಲ್ಲಿ ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆ ಆದರೆ ಉತ್ತಮ ಆಡಳಿತವನ್ನು ನೀಡಬಹುದು. ಧಾರವಾಡದ ಹುರಾ ಜಾತ್ರೆಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಬಹಿರಂಗಸಭೆಯಲ್ಲಿ ಮಠಾಧೀಶರು ಜಾತಿ ವಿಚಾರವನ್ನು ತೆಗೆದುಕೊಂಡು ಅಧಿಕಾರ ನೀಡಿ ಎಂದು ಹೇಳಿದ್ದು ತಪ್ಪು. ಮಠಾಧೀಶರನ್ನು ಎಲ್ಲ ವರ್ಗದ ಜನರು ಗೌರವದಿಂದ ಕಾಣುತ್ತಾರೆ. ಯಾವುದೇ ಮಠಾಧೀಶರಾದರು ರಾಜಕಾರಣಿಗಳಿಗೆ ಇಂಥವರಿಗೆ ಅಧಿಕಾರ ನೀಡಬೇಕು ಎಂದು ಹೇಳುವುದು ತುಂಬ ತಪ್ಪು ಎಂದರು.

ಧಾರ್ಮಿಕ ಸಭೆಯಲ್ಲಿ ಎಲ್ಲಾ ಪಕ್ಷದವರೂ ಬಂದಿರುತ್ತಾರೆ. ಜಾತ್ರಾ ಕಾರ್ಯಕ್ರಮಕ್ಕೆ ಕರೆದು ಹೀಗೆ ಹೇಳುವುದು ತಪ್ಪು ಎಂದು ಶ್ರೀನಿವಾಸಪ್ರಸಾದ್ ಸಿಎಂ ಪರ ಬ್ಯಾಟ್ ಬೀಸಿದರು.

Comments

Leave a Reply

Your email address will not be published. Required fields are marked *