ಬಾಂಬ್ ಇಟ್ಟವನ ಶೂಟ್ ಮಾಡಿ: ಶ್ರೀರಾಮುಲು

ಮೈಸೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿಯನ್ನು ಶೂಟ್ ಮಾಡಬೇಕೆಂದು ಮೈಸೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಮಾಜಘಾತುಕ ಶಕ್ತಿಗಳನ್ನು ಬೆಳೆಯಲು ಬಿಡಬಾರದು. ಕೆಲವರು ಶೋಕಿ, ಪ್ರಚಾರದ ಆಸೆಗಾಗಿ ಹೀಗೆಲ್ಲಾ ಮಾಡುತ್ತಾರೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡವರು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನೂ ಗಮನಿಸಿದ್ದೇವೆ. ಆದ್ದರಿಂದ ಅಂತಹ ವ್ಯಕ್ತಿಗಳನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದರು.

ಮಂಗಳೂರು ಬಾಂಬ್ ಪ್ರಕರಣದ ಬಗ್ಗೆ ಹೆಚ್‍ಡಿಕೆ ಹೇಳಿಕೆಗೂ ಕಿಡಿಕಾರಿದ ಶ್ರೀರಾಮುಲು, ಕುಮಾರಸ್ವಾಮಿ ಸ್ವಲ್ಪ ಸೀರಿಯಸ್‍ನೆಸ್ ಕಲಿಯಬೇಕು. ಕುಮಾರಸ್ವಾಮಿಗೆ ಸೀರಿಯಸ್ ನೆಸ್ ಇಲ್ಲ ಎಂದು ಮೊದಲಿನಿಂದಲೂ ನಾನು ಹೇಳಿಕೊಂಡು ಬಂದಿದ್ದೀನಿ. ಯಾವ ವಿಚಾರ ಗೇಲಿ ಮಾಡಬೇಕು, ಯಾವ ವಿಚಾರವನ್ನು ಗಂಭೀರವಾಗಿ ಮಾತನಾಡಬೇಕು ಎಂಬುದನ್ನು ಅವರು ಕಲಿತುಕೊಳ್ಳಬೇಕು. ಹಿಂದೆ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಈಗ ಬಾಂಬ್ ಪತ್ತೆ ಬಗ್ಗೆ ಗೇಲಿ ಮಾಡಿದ್ದಾರೆ. ಇವರು ಮಾಜಿ ಪ್ರಧಾನಿ ಮಗ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಎಂಬುದನ್ನು ಅವರು ಮರೆಯಬಾರದು ಎಂದು ಹೇಳಿದರು.

ಮಂಗಳೂರು ಗಲಭೆ ಪ್ರಕರಣಗಳಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ಕೈವಾಡವಿರುವ ಬಗ್ಗೆ ಅನುಮಾನವಿದೆ. ಮೈಸೂರಿನಲ್ಲಿ ತನ್ವೀರ್ ಸೇಠ್, ಬೆಂಗಳೂರಿನಲ್ಲಿ ಹ್ಯಾರಿಸ್ ಮೇಲೆ ಹಲ್ಲೆಯಾಗಿದೆ. ಜನಪ್ರತಿನಿಧಿಗಳನ್ನೇ ಗುರಿಯಾಗಿಸಿಕೊಂಡು ಹಲ್ಲೆ ಮಾಡಿದ್ದಾರೆ. ಸಮಾಜದ ಶಾಂತಿ ಕದಡುವ ವ್ಯಕ್ತಿ ಯಾರೇ ಆಗಿರಲಿ, ಯಾವುದೇ ಪಕ್ಷ, ಸಂಘಟನೆಯಾಗಿರಲಿ ಅವರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *