ನಂಜನಗೂಡಿನ ಸಾವಿರ ಕಾರ್ಮಿಕರಿಗೂ ಕೊರೊನಾ ಶಂಕೆ

– 30 ಮಂದಿಯ ಕ್ವಾರಂಟೈನ್‍ಗೆ ನಿರ್ಧಾರ

ಮೈಸೂರು: ನಂಜನಗೂಡಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಮೈಸೂರಿನಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಆತಂಕ ಹೆಚ್ಚಾಗುತ್ತಿದೆ.

ನಂಜನಗೂಡಿನ ಕಾರ್ಖಾನೆಯ ಸಾವಿರದಷ್ಟು ಕಾರ್ಮಿಕರಿಗೂ ಕೊರೊನಾ ಇರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕಾರ್ಖಾನೆಯಲ್ಲಿ ಮಂಡ್ಯ ಮೂಲದ 30 ಮಂದಿ ಕೆಲಸ ಮಾಡುತ್ತಿದ್ದು, ಈ 30 ಮಂದಿಯನ್ನು ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.

ಮಂಡ್ಯ ವಿಳಾಸದಲ್ಲಿರುವ 20 ಮಂದಿಗೆ ಆಸ್ಪತ್ರೆಗಳಲ್ಲಿ ಹಾಗೂ ಮೈಸೂರು ವಿಳಾಸದಲ್ಲಿರುವ ಉಳಿದ 10 ಮಂದಿಗೆ ಮೈಸೂರಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಫೇಸ್‍ಬುಕ್ ಲೈವ್ ಬಂದಿದ್ದ ಸಂಸದರು, ಕೊರೊನಾಗೆ ಸಂಬಂಧಿಸಿದಂತೆ ಸಂಘಟನೆ ಮತ್ತು ಕಾರ್ಯಕರ್ತರ ಕೆಲಸದ ವೈಖರಿ ತಿಳಿಸಿದರು. ಇದೇ ವೇಳೆ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ನೌಕರರು ಬಗ್ಗೆ ಮಾಹಿತಿ ನೀಡಿದರು. ಮೊದಲಿಗೆ ಒಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಮೂರರಿಂದ ಐದು ಆಯ್ತು. ಒಟ್ಟಾರೆ ಜಿಲ್ಲೆಯಲ್ಲಿ ಎಂಟು ಜನ ಸೋಂಕಿತರು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಮತ್ತೆ ನಾಲ್ಕು ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ ಎಂದಿದ್ದಾರೆ.

ಬಹುತೇಕರಲ್ಲಿ ತಮಗೆ ಕೊರೊನಾ ಇರೋದು ಬಗ್ಗೆಯೂ ಗೊತ್ತಿರಲಿಲ್ಲ. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರೋದು ದೃಢಪಟ್ಟಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *