ಸಿಎಂ ಎಚ್‍ಡಿಕೆ ಮಾತು ನಿಜವಾಯಿತೇ? ಜೆಡಿಎಸ್ ಕಡೆ ಒಲವು ತೋರಿಸುತ್ತಿದ್ದಾರಾ ಬಿಜೆಪಿ ಶಾಸಕ!

ಮೈಸೂರು: ಬಿಜೆಪಿಯವರು ಆಪರೇಷನ್‍ಗೆ ಮುಂದಾದರೆ, ನಾವು ಕೂಡಾ ಅವರ ಕೆಲವು ಶಾಸಕರನ್ನು ನಮ್ಮತ್ತ ಸೆಳೆದುಕೊಳ್ಳುತ್ತೇವೆ ಅಂತಾ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾತು ಸತ್ಯವಾಯಿತೇ ಎನ್ನುವ ಚರ್ಚೆ ಭಾರೀ ಸದ್ದು ಮಾಡುತ್ತಿದೆ.

ಹೌದು, ಮೈಸೂರು ದಸರಾದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಪ್ರತಿ ಕಾರ್ಯಕ್ರಮದಲ್ಲಿಯೂ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರ ದಸರಾ ಕಾರ್ಯಕ್ರಮ ಬಹಿಷ್ಕಾರ ಭರಾಟೆಯಲ್ಲಿಯೂ ನಿರಂಜನ್ ಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಬಿಜೆಪಿ ನಾಯಕರಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಶುಕ್ರವಾರ ನಡೆದ ಯುವ ದಸರಾ ಕಾರ್ಯಕ್ರಮವನ್ನು ಬಿಜೆಪಿ ಶಾಸಕರು ಬಹಿಷ್ಕಾರ ಮಾಡಿದ್ದರು. ಇತ್ತ ನನಗೆ ಆಹ್ವಾನ ಪತ್ರಿಕೆಯೇ ಬಂದಿಲ್ಲ ಅಂತಾ ಶಾಸಕ ಎಲ್.ನಾಗೇಂದ್ರ ಆಹ್ವಾನ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ದಸರಾ ಉದ್ಘಾಟನೆಗೆ ಎಚ್.ಡಿ.ಕುಮಾರಸ್ವಾಮಿ ಅವರು ತಡವಾಗಿ ಆಗಮಿಸಿದರು ಅಂತಾ ನಂಜನಗೂಡು ಶಾಸಕ ಹರ್ಷವರ್ಧನ್ ಬಹಿಷ್ಕಾರ ಮಾಡಿದ್ದರು. ಆದರೆ ಶಾಸಕ ನಿರಂಜನ್ ಕುಮಾರ್ ಅವರು ಮಾತ್ರ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಬಹುತೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.

ಈ ಹಿಂದೆ ಶಾಸಕ ನಿರಂಜನ್ ಕುಮಾರ್ ಅವರನ್ನು ಜೆ.ಡಿ.ಎಸ್ ನಾಯಕರು ಸಂಪರ್ಕ ಮಾಡಿದ್ದಾರೆ ಎಂದು ಚರ್ಚೆ ನಡೆದಿತ್ತು. ಇದಕ್ಕೆ ಸ್ಪಷ್ಟಣೆ ನೀಡಿದ್ದ ಶಾಸಕರು, ನನ್ನನ್ನ ಯಾರೂ ಸಂಪರ್ಕಿಸಿಲ್ಲ ಅಂತಾ ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *